ADVERTISEMENT

ಎಂಎಸ್‌ಎಂಇ ಆರ್ಥಿಕತೆಯ ಬೆನ್ನೆಲುಬು: ಟಿ.ದಿನೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:44 IST
Last Updated 3 ಡಿಸೆಂಬರ್ 2025, 7:44 IST
ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ರಫ್ತು ಉತ್ತೇಜನ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಟಿ. ದಿನೇಶ್‌ ಮಾತನಾಡಿದರು ಪ್ರಜಾವಾಣಿ ಚಿತ್ರ
ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ರಫ್ತು ಉತ್ತೇಜನ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಟಿ. ದಿನೇಶ್‌ ಮಾತನಾಡಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ದೇಶದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್‌ ತಿಳಿಸಿದರು.

ಎಫ್‌ಐಇಒ (ಫೆಡರೇಷನ್‌ ಆಫ್‌ ಇಂಡಿಯನ್‌ ಎಕ್ಸ್‌ಪೋರ್ಟ್‌ ಆರ್ಗನೈಸೇಷನ್‌) ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟವು ‘ರ‍್ಯಾಂಪ್ ಯೋಜನೆಯಡಿ ರಫ್ತು ಉತ್ತೇಜನ ಮತ್ತು ಸೌಲಭ್ಯ’ ವಿಷಯದ ಕುರಿತು ನಗರದ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಎಂಎಸ್ಎಂಇ ಘಟಕಗಳು 12 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಸಿವೆ. ಆ ಕ್ಷೇತ್ರವನ್ನು ಬಲಪಡಿಸಲು ಸರ್ಕಾರ ವಿಶೇಷ ಯೋಜನೆಗಳನ್ನು ಪರಿಚಯಿಸಿದೆ. ಪ್ರಸ್ತುತ ಮಾರುಕಟ್ಟೆಯು ವಿಶ್ವ ಮಟ್ಟದಲ್ಲಿ ಬೆಳೆದಿದೆ. ಹಳ್ಳಿಯಲ್ಲಿ ತಯಾರಿಸುವ ಉತ್ಪನ್ನಗಳಿಗೆ ಜಗತ್ತಿನೆಲ್ಲೆಡೆ ಮಾರಾಟಕ್ಕೆ ಅವಕಾಶವಿದೆ. ಸರ್ಕಾರವು ಹಲವು ದೇಶಗಳೊಂದಿಗೆ ಸುಂಕ ರಹಿತ ವ್ಯಾಪಾರದ ಒಪ್ಪಂದ ಮಾಡಿಕೊಂಡಿದ್ದು, ಉದ್ಯಮಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಚ್ಚಲೇನು ಕಾರಣ?

‘ಎಂಎಸ್‌ಎಂಇ ಘಟಕಗಳು ಮುಚ್ಚುತ್ತಿರುವ ಘಟನೆಯೂ ನಡೆಯುತ್ತಿದೆ. ಇದಕ್ಕೆ ನಿರ್ವಹಣೆ, ಕಾರ್ಮಿಕರು ಹಾಗೂ ಮೂಲಸೌಕರ್ಯ ಕಾರಣ ಎಂದು ಗುರುತಿಸಲಾಗುತ್ತದೆ. ಆದರೆ, ಮಾರುಕಟ್ಟೆ ವಿಸ್ತರಣೆ ಮಾಡದಿರುವುದೂ ಘಟಕ ಮುಚ್ಚಲು ಪ್ರಮುಖ ಕಾರಣಗಳಲ್ಲೊಂದು ಎಂಬುದನ್ನು ಒಪ್ಪಿಕೊಳ್ಳಬೇಕು’ ಎಂದು ತಿಳಿಸಿದರು.

‘ಪ್ರಸ್ತುತ ಸಣ್ಣ ಪ್ರಮಾಣದ ಉತ್ಪನ್ನವನ್ನೂ ರಫ್ತು ಮಾಡುವುದಕ್ಕೆ ಅವಕಾಶವಿದೆ. ಇದರಿಂದ ಉತ್ಪನ್ನದ ಗುಣಮಟ್ಟ ಹೆಚ್ಚಿಸುವ, ಉದ್ಯೋಗಾವಕಾಶ ಹೆಚ್ಚಿಸಲು ಸಾಧ್ಯ. ಕೈಗಾರಿಕೆಯಷ್ಟೇ ಜಿಲ್ಲೆಯ ಆರ್ಥಿಕತೆಗೆ ಕೊಡುಗೆ ನೀಡುವುದಿಲ್ಲ. ಕೃಷಿ, ಮೀನುಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆಗೂ ರಫ್ತಿನ ಅವಕಾಶವಿದ್ದು, ಅವೂ ಆರ್ಥಿಕತೆಯ ಮೂಲವಾಗಬಹುದು’ ಎಂದು ಹೇಳಿದರು.

‘ಅನೇಕ ಉದ್ಯಮಿಗಳು ಇಂದಿಗೂ ಹಳೆಯ ಯಾಂತ್ರಿಕತೆ ಬಳಸುತ್ತಿದ್ದಾರೆ. ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಭಾಗವಹಿಸುತ್ತಿಲ್ಲ. ಇದರಿಂದ ಹಿನ್ನಡೆಗೆ ಒಳಗಾಗುತ್ತಿದ್ದಾರೆ. ಮಾಹಿತಿ ಇದ್ದವರು ಈ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ. ಕೈಗಾರಿಕಾ ಒಕ್ಕೂಟವು ಮೈಸೂರಿನಲ್ಲಿ ರಫ್ತಿನ ಕುರಿತು ಮಾಹಿತಿ ಕೇಂದ್ರ ತೆರೆಯುವ ಚಿಂತನೆ ನಡೆಸಿದೆ’ ಎಂದು ಹೇಳಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ, ವಿ.ಪಿ. ಎಕ್ಸ್‌ಪೋರ್ಟ್ಸ್‌ನ ಸೆಲ್ವಕುಮಾರ್‌, ಬೆಂಗಳೂರಿನ ಎಫ್‌ಐಇಒ ಜಂಟಿ ನಿರ್ದೇಶಕಿ ಸೋಮಾ ಚೌಧರಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.