ADVERTISEMENT

ಮುಡಾ ನಿವೇಶನ: ಹರಾಜು ಮುಂದೂಡಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕರೆಯಿರಿ: ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 16:45 IST
Last Updated 3 ಆಗಸ್ಟ್ 2020, 16:45 IST

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ತನ್ನ ಅಧೀನದಲ್ಲಿರುವ 300ಕ್ಕೂ ಹೆಚ್ಚು ಮೂಲೆ, ವಾಣಿಜ್ಯ ಹಾಗೂ ಮಧ್ಯಂತರ ನಿವೇಶನಗಳ ಇ–ಹರಾಜು ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದು, ತಕ್ಷಣವೇ ಇದನ್ನು ಕೈ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ಪ್ರಾಧಿಕಾರದ ಸರ್ವ ಸದಸ್ಯರ ಸಭೆ ಕರೆದು ಚರ್ಚಿಸದೆ, ಆಯುಕ್ತರೇ ಈ ನಿರ್ಧಾರ ಪ್ರಕಟಿಸಿರುವುದು ಸರಿಯಲ್ಲ. ತುರ್ತಾಗಿ ವಿವಿಧ ವಿಷಯಗಳ ಕುರಿತಂತೆ ಚರ್ಚಿಸಲು ಸಭೆ ಕರೆಯಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲದ, ಮನೆಗಳು ನಿರ್ಮಾಣವಾಗದ ಹಾಗೂ ಇನ್ನೂ ಕ್ರಯಪತ್ರ ನೀಡದಿರುವ ಹೊಸ ಬಡಾವಣೆಗಳಾದ ವಸಂತ ನಗರ, ಲಾಲ್‌ಬಹದ್ದೂರ್ ಶಾಸ್ತ್ರಿ ನಗರ, ಲಲಿತಾದ್ರಿ ನಗರ, ಆರ್‌.ಟಿ.ನಗರಗಳಲ್ಲಿಯೂ ಮೂಲೆ ಮತ್ತು ವಾಣಿಜ್ಯ ನಿವೇಶನಗಳ ಇ–ಹರಾಜಿಗೆ ಮುಂದಾಗಿದ್ದು, ಇದರಿಂದ ಪ್ರಾಧಿಕಾರಕ್ಕೆ ಭಾರಿ ನಷ್ಟ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮುಡಾ ನಿಯಮಗಳಲ್ಲಿ ಮಧ್ಯಂತರ ನಿವೇಶನ ಹರಾಜು ಮಾಡಲು ಅವಕಾಶವಿಲ್ಲ. ಆದರೆ ಈ ಹರಾಜಿನಲ್ಲಿ ಶೇ 60ರಷ್ಟು ಮಧ್ಯಂತರ ನಿವೇಶನಗಳನ್ನು ತರಲಾಗಿದೆ. ಮಧ್ಯಂತರ ನಿವೇಶನ ಹರಾಜಿಗೆ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕಿದೆ. ಆದರೆ ಈ ಕೆಲಸವೇ ನಡೆದಿಲ್ಲ ಎಂದು ಮರಿತಿಬ್ಬೇಗೌಡ ದೂರಿದ್ದಾರೆ.

ಕೋವಿಡ್‌ ಸಂಕಷ್ಟ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿವೇಶನಗಳ ಹರಾಜಿನಿಂದ ಪ್ರಾಧಿಕಾರಕ್ಕೆ ತುಂಬಾ ಆರ್ಥಿಕ ನಷ್ಟವಾಗಲಿದೆ. ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲಿದೆ. ಆದ್ದರಿಂದ ತಕ್ಷಣವೇ ಇ–ಹರಾಜನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ತುರ್ತಾಗಿ ಸಭೆ ನಡೆಸುವಂತೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮೈಸೂರು ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.