ಮೈಸೂರು: ‘ಮುಡಾ ರಾದ್ದಾಂತಕ್ಕೆ ಕೆ. ಮರೀಗೌಡರೇ ಕಾರಣ’ ಎಂಬ ಮಾವಿನಹಳ್ಳಿ ಸಿದ್ದೇಗೌಡರ ಹೇಳಿಕೆಗೆ ಮುಡಾ ಅಧ್ಯಕ್ಷ ಮರೀಗೌಡ ಪ್ರತಿಕ್ರಿಯೆ ನೀಡಿದ್ದು ‘ಇಷ್ಟು ದಿನ ಭೂಗತರಾಗಿದ್ದ ಈ ನಾಯಕರ ನಡೆಯೇ ಸಂಶಯಾಸ್ಪದವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.
‘ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ, ಮುಡಾದ ಸಭೆ ಹಾಗೂ ಸರ್ಕಾರದ ಗಮನಕ್ಕೆ ಬಾರದಂತೆ ನಿವೇಶನ ಹಂಚಿಕೆ ಮಾಡದಂತೆ ನಾನೇ ಆಯುಕ್ತರಿಗೆ ಟಿಪ್ಪಣಿ ಬರೆದಿದ್ದೇನೆ. ಸಿದ್ದರಾಮಯ್ಯ ಅವರ ಪತ್ನಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿವೇಶನ ನೀಡಲಾಗಿದೆ. ಈಗ ಮುಖ್ಯಮಂತ್ರಿಯ ತೇಜೋವಧೆ ಮಾಡಲು ಬಿಜೆಪಿ–ಜೆಡಿಎಸ್ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಸಿದ್ದೇಗೌಡರಿಗೆ 2023ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ನಂತರದಲ್ಲಿ ಅವರು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಸಮಯದಲ್ಲಿ ನಾಪತ್ತೆಯಾಗಿ ಪರಾಭವಗೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂತಹವರು ನನ್ನ ಮೇಲೆ ಆರೋಪ ಮಾಡುವ ಮುನ್ನ ಎಚ್ಚರ ವಹಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.