ಮೈಸೂರು: ಕೊಲೆಯಾಗಿದ್ದಾರೆ ಎಂದು ಹೇಳಲಾದ ಕುವೆಂಪುನಗರದ ನಿವಾಸಿ ರಾಹುಲ್ ಅವರ ಮೃತದೇಹ ಹುಡುಕಲು ಪೊಲೀಸರ 4 ತಂಡಗಳನ್ನು ರಚಿಸಲಾಗಿದೆ.
10ರಿಂದ 15 ಮಂದಿ ನುರಿತ ಈಜುಗಾರರು ಮತ್ತು ಮುಳುಗುತಜ್ಞರನ್ನು ಕರೆಸಿಕೊಂಡು ಹೊಂಗಳ್ಳಿಯ ಆಸುಪಾಸಿನ ವರುಣಾ ನಾಲೆಯನ್ನು ಜಾಲಾಡತೊಡಗಿದ್ದಾರೆ.
ನಾಲೆಯ ನೀರು ಹರಿಯುವ ಕೆರೆಗಳಲ್ಲೂ ಶೋಧ ಕಾರ್ಯ ನಡೆದಿದೆ. ಆದರೆ, ಎಲ್ಲೂ ಮೃತದೇಹದ ಸುಳಿವು ಲಭ್ಯವಾಗಿಲ್ಲ.
ಈ ಮಧ್ಯೆ ಕೊಲೆ ಆರೋಪಿಗಳಾದ ಸಂಜಯ್, ಶಾಂತರಾಜು ಹಾಗೂ ಅಬ್ಬಾಸ್ ಅಲಿ ಅವರು ಕೊಲೆ ಮಾಡಲು ಕ್ಲೋರೋಫಾರಂನ್ನು ಆನ್ಲೈನ್ನಲ್ಲಿ ತರಿಸಿಕೊಂಡಿರುವ ವಿಷಯ ವಿಚಾರಣೆ ವೇಳೆ ಗೊತ್ತಾಗಿದೆ.
ಕೇವಲ ₹ 300 ನೀಡಿ ಆನ್ಲೈನ್ನಲ್ಲಿ ಇದನ್ನು ತರಿಸಿಕೊಂಡು ರಾಹುಲ್ ಮೂಗಿಗೆ ಬಿಗಿಯಾಗಿ ಹಿಡಿಯಲಾಗಿದೆ. ಇದರಿಂದ ಉಸಿರುಗಟ್ಟಿ ರಾಹುಲ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೂ ಪೊಲೀಸರು 18ಕ್ಕೂ ಹೆಚ್ಚು ಮೃತದೇಹಗಳನ್ನು ಪರಿಶೀಲನೆ ನಡೆಸಿದ್ದಾರೆ.
ಎರಡು ಬೈಕ್ಗಳ ನಡುವೆ ಡಿಕ್ಕಿ; ಸವಾರ ಸಾವು
ಮೈಸೂರಿನ ಗಂಗೋತ್ರಿ ಬಡಾವಣೆಯ 2ನೇ ಕ್ರಾಸ್ನಲ್ಲಿ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಕುಕ್ಕರಹಳ್ಳಿ ನಿವಾಸಿ ಜೆ.ಸುನಿಲ್ (28) ಮೃತಪಟ್ಟಿದ್ದಾರೆ.
ಗೃಹ ರಕ್ಷಕ ದಳದ ಸಿಬ್ಬಂದಿಯಾಗಿದ್ದ ಸುನೀಲ್ ತನ್ನ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಜನತಾ ನಗರದ ನಿವಾಸಿ ಗಿರಿಧರ್ ಅವರು ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಒಂದು ವೇಳೆ ಸುನಿಲ್ ಹೆಲ್ಮೆಟ್ ಧರಿಸಿದ್ದರೆ ಬದುಕಿ ಉಳಿಯುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.