ಮೈಸೂರು: ಕ್ಷುಲ್ಲಕ ಕಾರಣಕ್ಕೆ ನಗರದ ವೀರನಗೆರೆಯ ಮಹದೇವಮ್ಮ ಎಂಬುವರನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿಯನ್ನು ಲಷ್ಕರ್ ಠಾಣೆಯ ಪೊಲೀಸರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬಂಧಿಸಿದ್ದಾರೆ.
ಶ್ರೀರಂಗಪಟ್ಟಣದ ಹನುಮಂತ ನಗರದ ನಿವಾಸಿ ಅಲ್ವೀನ್ (36) ಬಂಧಿತ ಆರೋಪಿ.
ಅಲ್ವೀನ್ ವೀರನಗೆರೆಯಲ್ಲಿ ವಾಸವಿದ್ದ. ತನ್ನ ಪತ್ನಿ ಜೊತೆ ಅ.17ರಂದು ಜಗಳ ಮಾಡುತ್ತಿದ್ದ. ಜಗಳ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಎದುರು ಮನೆಯ ಮಹದೇವಮ್ಮ ಗಂಡ–ಹೆಂಡತಿಯ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದರು.
ಇದಕ್ಕೆ ಕುಪಿತನಾದ ಅಲ್ವೀನ್ ಪತ್ನಿ ಜೊತೆ ಜಗಳವಾಡುವುದನ್ನು ಬಿಟ್ಟು, ತಮ್ಮ ಮಧ್ಯೆ ಪ್ರವೇಶಿಸಿದ ಮಹದೇವಮ್ಮ ಅವರಿಗೆ ಕಾಲಿನಿಂದ ಒದ್ದಿದ್ದಾನೆ. ಅವರ ತಲೆಯನ್ನು ಹಿಡಿದುಕೊಂಡು ಜೋರಾಗಿ ಗೋಡೆಗೆ ಗುದ್ದಿಸಿದ್ದಾನೆ. ನಂತರ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ರಕ್ತ ಗಾಯ ಮಾಡಿದ್ದ. ಇದರಿಂದ ಮಹದೇವಮ್ಮ ಮೃತಪಟ್ಟಿದ್ದರು.
ಘಟನೆಯ ನಂತರ ಅಲ್ವೀನ್ ವೀರನಗೆರೆಯ ಮನೆಯನ್ನು ಖಾಲಿ ಮಾಡಿಕೊಂಡು, ಶ್ರೀರಂಗಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದ. ತಲೆಮರೆಸಿಕೊಂಡು ಒಡಾಡುತ್ತಿದ್ದ. ಆರೋಪಿಯ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಲಷ್ಕರ್ ಪೊಲೀಸರು ಆರೋಪಿಯನ್ನು ಶ್ರೀರಂಗಪಟ್ಟಣದಲ್ಲಿ ಬಂಧಿಸಿದ್ದಾರೆ. ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ವೀನ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಲ್ವೀನ್ ವಿನಾಃ ಕಾರಣ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿ, ಕೊಲೆ/ಮಾರಣಾಂತಿಕ ಹಲ್ಲೆ ಮಾಡುವ ಪ್ರವೃತಿ ಉಳ್ಳವ. ಈ ಹಿಂದೆ ಮೈಸೂರು ನಗರದ ನರಸಿಂಹರಾಜ ಪೊಲೀಸ್ ಠಾಣೆ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಕೊಲೆ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಈತ ಜೀವಾವಧಿ ಶಿಕ್ಷೆ ಅನುಭವಿಸಿ, ಸೆಪ್ಟೆಂಪರ್ ತಿಂಗಳಲ್ಲಷ್ಟೇ ಕಾರಾಗೃಹದಿಂದ ಬಿಡುಗಡೆ ಆಗಿದ್ದ ಎಂದು ಲಷ್ಕರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.