ಬಂಧನ
ಮೈಸೂರು: ದೊಡ್ಡಕೆರೆ ಮೈದಾನದ ಬಳಿ ವೆಂಕಟೇಶ್ ಕೊಲೆ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬುಧವಾರ ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ನಾಯ್ಡು ನಗರ ನಿವಾಸಿ ಕೀರ್ತಿ ಕುಮಾರ್ (28), ಗಾಯತ್ರಿಪುರಂನ ಹಾಲಪ್ಪ (24), ವೀರನಗೆರೆಯ ನಂದನ್ (27), ಸಿದ್ಧಾರ್ಥ ಬಡಾವಣೆಯ ನಿರೂಪ್ (28), ನಜರ್ಬಾದ್ನ ಭರತ್ (22) ಹಾಗೂ ಮಂಡ್ಯ ಜಿಲ್ಲೆಯ ಮೈಲಾಪುರ ಗ್ರಾಮದ ಧ್ರುವಕುಮಾರ್ (24) ಬಂಧಿತರು.
‘ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿತ್ತು. ಕಾರಿನಲ್ಲಿ ಪರಾರಿಯಾಗಲು ಕೋಟೆಹುಂಡಿಯಲ್ಲಿ ಇದ್ದಾಗ ದಾಳಿ ನಡೆಸಿ ಬಂಧಿಸಿದ್ದೇವೆ. ಅವರಿಂದ ಕೃತ್ಯಕ್ಕೆ ಬಳಸಿದ್ದ ಮಚ್ಚು, ಲಾಂಗ್ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ಸುಂದರ್ ರಾಜ್ ತಿಳಿಸಿದ್ದಾರೆ.
‘ಕ್ಯಾತಮಾರನಹಳ್ಳಿ ನಿವಾಸಿ ಗಿಲ್ಕಿ ವೆಂಕಟೇಶ್ ದೊಡ್ಡಕೆರೆ ಮೈದಾನದ ಬಳಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೊದಲ್ಲಿ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿದ್ದರು. ಕೀರ್ತಿ ಕುಮಾರ್, ಹಾಲಪ್ಪ, ನಂದನ್, ನಿರೂಪ್ ಕೆಳಗಿಳಿದು, ವೆಂಕಟೇಶ್ ಕಣ್ಣಿಗೆ ಕಾರದ ಪುಡಿ ಎರಚಿ ಕಾರಿನಿಂದ ಎಳೆದು ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಭರತ್ ಹಾಗೂ ಧ್ರುವ ಕುಮಾರ್ ಆಟೊದಲ್ಲೇ ಇದ್ದರು. ಈ ವೇಳೆ ಸಾರ್ವಜನಿಕರು ತೆಗೆದಿರುವ ಫೊಟೊ, ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಆರೋಪಿಗಳ ಪತ್ತೆಗೆ ಸಹಕರಿಸಿತು’ ಎಂದು ಮಾಹಿತಿ ನೀಡಿದರು.
ಗ್ಯಾಂಗ್ ವಾರ್ ಲಕ್ಷಣ
‘ಕೊಲೆಯ ಹಿಂದೆ ಗ್ಯಾಂಗ್ ವಾರ್ ಲಕ್ಷಣ ಕಂಡುಬಂದಿದೆ. ಈಚೆಗೆ ಕೊಲೆಯಾದ ಕ್ಯಾತಮಾರನ ಹಳ್ಳಿಯ ರೌಡಿಶೀಟರ್ ಕಾರ್ತಿಕ್, ವೆಂಕಟೇಶ್ ಹಾಗೂ ಹಾಲೇಶ್ ಜೊತೆಗಿದ್ದರು. ಆದರೆ ಯಾವುದೋ ಕಾರಣಕ್ಕೆ ಮನಸ್ತಾಪವಾಗಿ ವೆಂಕಟೇಶ್ ಅವರಿಂದ ದೂರವಾಗಿದ್ದರು. ಕಾರ್ತಿಕ್ ಕೊಲೆಯ ನಂತರ ವೆಂಕಟೇಶ್ ಮುನ್ನೆಲೆಗೆ ಬರಲು ಯತ್ನಿಸಿದ್ದ’ ಎಂದು ಮೂಲಗಳು ತಿಳಿಸಿವೆ.
‘ಇದಕ್ಕೆ ಹಾಲಪ್ಪ ಹಾಗೂ ಸಹಚರರ ವಿರೋಧವಿತ್ತು. ವಾರದ ಹಿಂದೆ ಹಾಲಪ್ಪ ಸ್ನೇಹಿತ ಮಂಜುನಾಥ್ ಮನೆ ಮುಂದೆ ಹಾಲಪ್ಪ ಎಲ್ಲಿ ಎಂದು ವೆಂಕಟೇಶ್ ತಂಡ ಜಗಳವಾಡಿರುವ ಬಗ್ಗೆ ನಜರಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿದ್ಯಾಮಾನ ಮುಂದುವರೆದು ಕೊಲೆಯ ಹಂತಕ್ಕೆ ತಲುಪಿದೆ’ ಎನ್ನಲಾಗಿದೆ. ಹೆಚ್ಚಿನ ವಿಚಾರಣೆಯ ಬಳಿಕ ಸ್ಪಷ್ಟವಾದ ಕಾರಣ ಗೊತ್ತಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.