ADVERTISEMENT

ಮುಸ್ಲಿಮರನ್ನು ಕರೆದು ಹಂದಿ ಮಾಂಸ ಬಡಿಸಿ: ಹಂಸಲೇಖ ವಿರುದ್ಧ ಪ್ರತಾಪಸಿಂಹ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 18:43 IST
Last Updated 15 ನವೆಂಬರ್ 2021, 18:43 IST
 ಸಂಸದ ಪ್ರತಾಪಸಿಂಹ
ಸಂಸದ ಪ್ರತಾಪಸಿಂಹ   

ಮೈಸೂರು: ‘ಆಹಾರ ಪದ್ಧತಿ ಮೂಲಕ ಸಮಾನತೆ ತರಬಹುದು ಎನಿಸಿದರೆ ನೀವು, ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರನ್ನು ಕರೆದು ಹಂದಿ ಮಾಂಸದ ಊಟ ಬಡಿಸಿ. ಆಗ ಏನು ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾಗುತ್ತದೆ’ ಎಂದು ಸಂಸದ ಪ್ರತಾಪಸಿಂಹ, ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದು, ಮನಸ್ಸಿನೊಳಗಿನ ತಾರತಮ್ಯ ತೊಡೆದುಹಾಕಲು. ಆಹಾರ ಪದ್ಧತಿ ವಿಚಾರಕ್ಕಾಗಿ ಅಲ್ಲ. ಮಾಂಸ ತಿಂದರೆ ಸಮಾನತೆ ತರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ನೀವು ಬಡಿಸಿದ ಹಂದಿ ಮಾಂಸದ ಊಟವನ್ನು ಮುಸ್ಲಿಮರು ತಿನ್ನದಿದ್ದರೆ ಅದು ಅಸಮಾನತೆಯ ಪ್ರತೀಕವೇ? ಇಸ್ಲಾಂನಲ್ಲಿ ಹಂದಿ ಮಾಂಸ ಸೇವನೆ ನಿಷಿದ್ಧ. ಹಾಗೆಯೇ, ಸಾಧುಸಂತರೂ ಸಸ್ಯಾಹಾರಿಗಳು. ಆಹಾರ ಪದ್ಧತಿಯ ಬಗ್ಗೆ ಅಸಂಬದ್ಧವಾಗಿ ಮಾತನಾಡುವ ಗೀಳು ನಿಮಗೆ ಏಕೆ ಬಂತು ಗೊತ್ತಿಲ್ಲ. ಈಚೆಗೆ ನಿಮ್ಮ ಸಿನಿಮಾ ಸಂಗೀತ, ಸಾಹಿತ್ಯ ಎಲ್ಲವೂ ನಿಂತಿದೆ. ಪ್ರಗತಿಪರ ಎನಿಸಿಕೊಳ್ಳಲು, ಪುಕ್ಕಟೆ ಪ್ರಚಾರಕ್ಕೆ ಈ ರೀತಿ ಮಾತನಾಡುತ್ತಿದ್ದೀರಾ’ ಎಂದು ಕೇಳಿದರು.

ADVERTISEMENT

‘ಹಂಸಲೇಖರ ಹೇಳಿಕೆಯಿಂದ ವೈಯಕ್ತಿಕವಾಗಿ ನೋವಾಗಿದೆ. ಪೇಜಾವರ ಶ್ರೀಗಳ ಕೋಟ್ಯಂತರ ಅಭಿಮಾನಿಗಳಿಗೆ ನೋವು ಹಾಗೂ ಸಿಟ್ಟು ತಂದಿದೆ. ಅವರ ಬಗ್ಗೆ ಮಾತನಾಡುವಾಗ ಹಂಸಲೇಖ ಯೋಚನೆ ಮಾಡಬೇಕಿತ್ತು, ಪರಿಜ್ಞಾನ ಇಟ್ಟುಕೊಳ್ಳಬೇಕಿತ್ತು. ಪೇಜಾವರರು ಬೇರೆ ಸ್ವಾಮಿಗಳಂತೆ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.