ಬನ್ನೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ರೈತ ಮುಖಂಡರು ದೆಹಲಿಯತ್ತ ಪ್ರಯಾಣ ಬೆಳೆಸಿದರು.
ಭತ್ತದ ಖರೀದಿ ಕೇಂದ್ರವನ್ನು ಸಕಾಲದಲ್ಲಿ ತೆರೆಯುತ್ತಿಲ್ಲ, ಕಟಾವು ಮುಗಿದ 2 ತಿಂಗಳ ನಂತರ ದಲ್ಲಾಳಿಗಳಿಂದ ಭತ್ತ ಖರೀದಿ ಮಾಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ. ನರೇಗಾ ಯೋಜನೆಯಡಿಯಲ್ಲಿ ಬೆಳೆ ಬೆಳೆಯಲು ಸಹಾಯಧನ ಸಿಗುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ ₹ 3500 ನಿಗದಿ ಮಾಡಬೇಕು. ತರಕಾರಿ, ಹಣ್ಣುಗಳಿಗೆ ಬಜೆಟ್ನಲ್ಲಿ ಪ್ರತಿ ವರ್ಷ ಪ್ರತ್ಯೇಕ ಕನಿಷ್ಠ ಬೆಲೆ ನಿಗದಿ ಮಾಡಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು.
ಈ ಕುರಿತು ಮಾತನಾಡಿದ ರೈತ ಮುಖಂಡ ನಾರಾಯಣ್, ‘ರೈತರಿಗೆ ರೈತಾಪಿ ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ರೋಸಿ ಹೋಗುತ್ತಿದ್ದಾರೆ. ತಮ್ಮ ಕಾಲಕ್ಕೆ ರೈತ ಜೀವನ ಸಾಕು, ಮಕ್ಕಳಿಗೆ ರೈತರ ಸ್ಥಿತಿ ಬೇಡವೆಂದು ಅನ್ಯ ಉದ್ಯೋಗದತ್ತ ಮುಖ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಹೀಗೆ ಮುಂದುವರೆದರೆ ದೇಶದಲ್ಲಿ ಬೆಳೆ ಬೆಳೆಯಲು ಸರ್ಕಾರದಿಂದಲೇ ಉದ್ಯೋಗ ನೀಡುವ ಪರಿಸ್ಥಿತಿ ತಲೆದೋರಬಹುದು. ಇಂತಹ ಸ್ಥಿತಿ ಬಾರದಿರಲು ಸರ್ಕಾರವನ್ನು ಎಚ್ಚರಗೊಳಿಸಲು ದೆಹಲಿಗೆ ಪ್ರಯಾಣಿಸುತ್ತಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.