ADVERTISEMENT

‘₹4.62 ಲಕ್ಷದಲ್ಲಿ ಸುಸಜ್ಜಿತ ಮನೆ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 17:13 IST
Last Updated 7 ಡಿಸೆಂಬರ್ 2018, 17:13 IST
ಹುಣಸೂರು ನಗರಸಭೆ ಕಾದಿಟ್ಟ ನಿವೇಶನ ಮತ್ತು ವಾಂಬೆ ಕಾಲೊನಿಗೆ ಶಾಸಕ ಎಚ್‌.ವಿಶ್ವನಾಥ್ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು
ಹುಣಸೂರು ನಗರಸಭೆ ಕಾದಿಟ್ಟ ನಿವೇಶನ ಮತ್ತು ವಾಂಬೆ ಕಾಲೊನಿಗೆ ಶಾಸಕ ಎಚ್‌.ವಿಶ್ವನಾಥ್ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು   

ಹುಣಸೂರು: ನಗರಸಭೆ ವ್ಯಾಪ್ತಿಯಲ್ಲಿ 8 ಎಕರೆ ನಿವೇಶನ ಲಭ್ಯವಿದ್ದು, ಅಲ್ಲಿ ಮನೆ ನಿರ್ಮಿಸಿ ಕಡುಬಡವರಿಗೆ ಮನೆ ನೀಡುವ ಯೋಜನೆಗೆ ಅತಿ ಶೀಘ್ರದಲ್ಲೆ ಚಾಲನೆ ನೀಡಲಿದ್ದೇವೆ ಎಂದು ಶಾಸಕ ಎಚ್‌.ವಿಶ್ವನಾಥ್ ಹೇಳಿದರು.

ನಗರದ ಹೊರ ವಲಯದಲ್ಲಿ ನಗರಸಭೆ ಆಶ್ರಯ ಸಮಿತಿ ಸದಸ್ಯರ ತಂಡದೊಂದಿಗೆ ವಸತಿ ಸಮುಚ್ಚಯಕ್ಕೆ ಕಾದಿಟ್ಟ 8 ಎಕರೆ ಕೃಷಿ ಭೂಮಿ ಹಾಗೂ ವಾಂಬೆ ಯೋಜನೆ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿಯಿಂದ ಪ್ರಥಮ ಹಂತದಲ್ಲಿ ನಗರದ 4 ಕೊಳ ಗೇರಿ ಕಾಲೊನಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ಅಂದಾಜು ₹ 4.62 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಪ್ರಥಮ ಕಂತಿನಲ್ಲಿ 500 ಮನೆ ಮಂಜೂರಾಗಿದ್ದು, ಇದಕ್ಕಾಗಿ ₹ 25.44 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ADVERTISEMENT

ಫಲಾನುಭವಿಗಳು ಯಾವುದೇ ಜಾತಿಗೆ ಸೇರಿದ್ದರೂ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಎಸ್.ಸಿ ಫಲಾನುಭವಿಗೆ ₹ 2 ಲಕ್ಷ ರಿಯಾಯಿತಿ ಮತ್ತು ಸಾಮಾನ್ಯ ವರ್ಗದವರಿಗೆ ₹ 1.50 ನೀಡುವುದರಿಂದಿಗೆ ಫಲಾನುಭವಿಗೆ ಸಾಲದ ವ್ಯವಸ್ಥೆಯೂ ಕಲ್ಪಿಸಿ ಹಣಕಾಸು ಸೌಲಭ್ಯ ನೀಡುವ ವ್ಯವಸ್ಥೆ ಸರ್ಕಾರ ಕೈಗೊಂಡಿದೆ. ಫಲಾನುಭವಿಗಳು ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಕಾರ್ಡ್‌ ಹೊಂದಿದ್ದರೆ ಮಾತ್ರ ₹2 ರಿಂದ ₹5 ಲಕ್ಷದ ವರಗೂ ಮನೆ ನಿರ್ಮಿಸಲು ಬ್ಯಾಂಕ್ ಸಾಲ ಸಿಗಲಿದೆ ಎಂದರು.

ನಗರಸಭೆ ವ್ಯಾಪ್ತಿಗೆ ಸೇರಿದ 8 ಎಕರೆ ಭೂಮಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಅದರಲ್ಲಿ ಪ್ರಧಾನಮಂತ್ರಿ ಗೃಹ ನಿರ್ಮಾಣ ಯೋಜನೆ ಅಡಿಯಲ್ಲಿ 900 ಮನೆ ನಿರ್ಮಿಸಿ 5 ಸಾವಿರ ಜನರಿಗೆ ಆಶ್ರಯ ಕಲ್ಪಿಸುವ ಬೃಹತ್‌ ಯೋಜನೆ ತಲೆ ಎತ್ತಲಿದೆ. ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಜಿಗಳನ್ನು ಮರು ಪರಿಶೀಲಿಸಲಾಗುವುದು. ಫೆಬ್ರುವರಿ ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುವ ಸಂಭವವಿದ್ದು, ಅಷ್ಟ ರೊಳಗೆ ಬಹುಮಹಡಿ ಕಾಮಗಾರಿ ಯೋಜನೆಗೆ ಭೂಮಿಪೂಜೆ ನೆರವೇರಿ ಸುವ ಆಲೋಚನೆ ಹೊಂದಿದ್ದೇನೆ ಎಂದರು.

ಬಹುಮಹಡಿ ಮನೆ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ವಾರ್ಡ್‌ ವಾರು ಅರ್ಜಿಗಳನ್ನು ನಗರಸಭಾ ಸದಸ್ಯರು ಅರ್ಹ ಫಲಾನುಭವಿಗಳನ್ನು ಗುರುತಿಸಿ ಅರ್ಜಿ ಸಂಗ್ರಹಿಸಿ ಆನ್‌ಲೈನ್‌ ಅಪ್ ಲೋಡ್‌ ಮಾಡಲು ಪರಿಶೀಲನೆ ಕಾರ್ಯ ನಡೆದಿದೆ. ವಿರೋಧ ಪಕ್ಷದವರು ಸಾರ್ವಜನಿಕರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡಿ ಗೊಂದಲ ಮೂಡಿಸುತ್ತಿದ್ದಾರೆ. ಸಾರ್ವಜನಿಕರು ಆತಂಕಪಡೆದೆ ವಿಶ್ವಾಸದಿಂದ ಇರಬೇಕಾಗಿ ಮನವಿ ಮಾಡಿದರು.

ವಾಂಬೆ ಹೌಸಿಂಗ್: ವಾಂಬೆ ಹೌಸಿಂಗ್ ಯೋಜನೆಗೆ ಸಂಬಂಧಿಸಿದಂತೆ 600 ನಿವೇಶನ ಖಾಲಿ ಇದ್ದು, ಮಾಜಿ ಶಾಸಕ ದಿ. ವಿ.ಪಾಪಣ್ಣ ಅವರ ಅವಧಿಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದರೂ ಸಮಸ್ಯೆಗಳ ಸರಪಳಿ ಸುತ್ತಿಕೊಂಡಿತ್ತು. ಈಗ ಎಲ್ಲವೂ ಇತ್ಯರ್ಥಗೊಂಡಿದ್ದು, 600 ನಿವೇಶನವನ್ನು ಫಲಾನುಭವಿಗೆ ವಿತರಿಸುವ ಕ್ರಮಕ್ಕೆ ನಗರಸಭೆ ಮುಂದಾಗಲಿದೆ ಎಂದರು.

ನಗರಸಭೆ ಅಧ್ಯಕ್ಷ ಎಚ್.ವೈ.ಮಹದೇವ್‌, ಶಿವಕುಮಾರ್‌, ಸುನೀತಾ ಜಯರಾಮೇಗೌಡ, ಸತೀಶ್‌ಕುಮಾರ್‌, ತಹಶೀಲ್ದಾರ್‌ ಮೋಹನ್‌, ಇ.ಒ ಕೃಷ್ಣಕುಮಾರ್‌, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ತೇಜಶ್‌, ನೂರುತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.