ADVERTISEMENT

ರಾಜ್ಯ ಸರ್ಕಾರ ಚಾಕೊಲೇಟ್‌ ನೀಡಿದೆ: ಮೇಯರ್‌ ತಸ್ನೀಂ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 1:51 IST
Last Updated 2 ಅಕ್ಟೋಬರ್ 2020, 1:51 IST
ತಸ್ನೀಂ
ತಸ್ನೀಂ   

ಮೈಸೂರು: ದಸರಾ ಮಹೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆಗೆ ಚಾಕೊಲೇಟ್‌ ನೀಡಿದೆ ಎಂದು ಮೇಯರ್‌ ತಸ್ನೀಂ ವ್ಯಂಗ್ಯವಾಡಿದರು.

ನಾಡಹಬ್ಬದ ಸಿದ್ಧತೆಗಾಗಿ ಪಾಲಿಕೆಗೆ ₹ 10 ಕೋಟಿ ಅನುದಾನ ನೀಡುವಂತೆ ಸರ್ಕಾರವನ್ನು ಕೇಳಿದ್ದೆವು. ₹ 5 ಕೋಟಿಯನ್ನಾದರೂ ನಮಗೆ ನೀಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ಮೈಸೂರು ಜಿಲ್ಲಾಡಳಿತಕ್ಕೆ ಒಟ್ಟು ₹ 10 ಕೋಟಿ ನೀಡಿದೆ. ಈ ಸಮಯದಲ್ಲಿ ಜಿಲ್ಲಾಧಿಕಾರಿಯನ್ನೂ ಬದಲಾಯಿಸಿದೆ. ಈಗ ವರ್ಗಾವಣೆ ನಡೆಯಬಾರದಿತ್ತು ಎಂದರು.

ದಸರಾ ಅನುದಾನವನ್ನುಹೇಗೆ ಹಂಚಿಕೆ ಮಾಡಬೇಕೆಂದು ಸರ್ಕಾರ ಯಾವುದೇ ರೂಪುರೇಷೆ ನೀಡಿಲ್ಲ. ನಾಡಹಬ್ಬದಲ್ಲಿ ಪಾಲಿಕೆಯ ಪಾತ್ರವೇನು ಎಂಬುದರ ಬಗ್ಗೆಯೂ ಸಮರ್ಪಕವಾಗಿ ತಿಳಿಸಿಲ್ಲ. ಹೀಗಾಗಿ, ಸರಳ ದಸರಾದಲ್ಲಿ ಶೇ 90ರಷ್ಟು ಪಾಲಿಕೆಯ ಪಾತ್ರ ವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಪಾಲಿಕೆಯಿಂದಲೇ ಪ್ರತಿ ವಾರ್ಡಿಗೆ ₹ 10 ಲಕ್ಷ ನೀಡುವಂತೆ ಆಯುಕ್ತರಿಗೆ ಮನವಿ ಮಾಡಿದ್ದೇನೆ. ಆ ಮೂಲಕ ವಾರ್ಡ್‌ ಗಳಲ್ಲಿನ ಸಣ್ಣ ಪುಟ್ಟ ಕಾಮಗಾರಿಗಳನ್ನು ಮಾಡುತ್ತೇವೆ’ ಎಂದು ತಿಳಿಸಿದರು.

ಜಂಬೂಸವಾರಿ ವೇಳೆ ಮೇಯರ್‌ ಆಗಿ ಕುದುರೆ ಏರುವ ವಿಚಾರದ ಕುರಿತು, ‘ಕುದುರೆ ಸವಾರಿ ಬಗ್ಗೆ ಇದುವರೆಗೆ ಯಾವುದೇ ನಿರ್ದೇಶನ ಬಂದಿಲ್ಲ. ದಸರೆಗೆ ಒಂದು ತಿಂಗಳು ಮುಂಚಿತವಾಗಿಯೇ ತರಬೇತಿ ಪಡೆಯುವಂತೆ ಸೂಚನೆ ನೀಡಬೇಕಿತ್ತು. ಏನೂ ನಡೆದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.