ADVERTISEMENT

ದಸರಾ: ಫಿರಂಗಿ ಗಾಡಿಗಳಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 8:41 IST
Last Updated 29 ಆಗಸ್ಟ್ 2022, 8:41 IST
   

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ ಹಾಗೂ ಅಶ್ವಾರೋಹಿ‌ ದಳವು ಭಾರಿ ಶಬ್ದಕ್ಕೆ ಬೆಚ್ಚದಂತೆ ನೋಡಿಕೊಳ್ಳುವ ಉದ್ದೇಶದಿಂದ ಕುಶಾಲತೋಪು ಸಿಡಿಸುವ ಪೂರ್ವ ತಾಲೀಮು ನಡೆಸಲು ಫಿರಂಗಿ ಗಾಡಿಗಳಿಗೆ ಪೂಜೆ‌ ಸಲ್ಲಿಸಲಾಯಿತು.

ನಗರದ ಅಂಬಾವಿಲಾಸ ಅರಮನೆ ಆವರಣದ ಆನೆಬಾಗಿಲು ಬಳಿ ಫಿರಂಗಿ ಗಾಡಿಗಳಿಗೆ ಜಿಲ್ಲಾ ಉಸ್ತುವಾರಿ ‌ಸಚಿವ ಎಸ್.ಟಿ.ಸೋಮಶೇಖರ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. 11 ಫಿರಂಗಿ ಗಾಡಿಗಳಿಗೆ ಪೂಜೆ, ಮಹಾಮಂಗಳಾರತಿ‌ ನೆರವೇರಿತು.
ಕುಶಾಲತೋಪು ಸಿಡಿಸುವ ಸಿಬ್ಬಂದಿಯನ್ನು ಸಚಿವರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಸಚಿವರು, ದಸರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಉಪ ಸಮಿತಿಗಳು ತಯಾರಿ ಮಾಡಿಕೊಳ್ಳುತ್ತಿವೆ. ಕುಶಾಲತೋಪು‌ ಸಿಡಿಸುವ ಪ್ರಕ್ರಿಯೆಗಾಗಿ ಫಿರಂಗಿ ಗಾಡಿಗಳನ್ನು ಸಜ್ಜುಗೊಳಿಸಲಾಗಿದೆ' ಎಂದರು.

ADVERTISEMENT

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುತ್ತದೆ. ಆನೆಗಳಿಗೆ ದೊಡ್ಡ ಪ್ರಮಾಣದ ಶಬ್ದವನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದೆ' ಎಂದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.