ಮೈಸೂರು: ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಬಿ.ರಮ್ಯಾ ಹಾಗೂ ಆರ್.ರಘು ಮಾನವ ಮಂಟಪದ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಹೌಸ್ನಲ್ಲಿ ಮಂತ್ರ ಮಾಂಗಲ್ಯ ಮದುವೆಯಾದರು.
ಚಿತ್ರದುರ್ಗದ, ಭೋವಿ ಜನಾಂಗದ ರಮ್ಯಾ ಹಾಗೂ ಮೈಸೂರು ತಾಲ್ಲೂಕಿನ ನಾಗನಹಳ್ಳಿಯ ದಲಿತ ಸಮಾಜಕ್ಕೆ ಸೇರಿದ ರಘು ಎಂ.ಎ. ಓದುವ ವೇಳೆಯಿಂದ ಪ್ರೀತಿಸುತ್ತಿದ್ದರು.
ಬಸವ ಜಯಂತಿಯಂದು ಮದುವೆಯಾದ ಅವರಿಗೆ ಮುಖಂಡ ಉಗ್ರನರಸಿಂಹೇಗೌಡ ವಿವಾಹ ಸಂಹಿತೆ ಬೋಧಿಸಿದರು. ‘ಸಾಲ ಮಾಡಿ ಮದುವೆ ಮಾಡಿದವರು ಕೆಟ್ಟು ಹೋಗುತ್ತಾರೆ. ಇದಕ್ಕಾಗಿ ಆರೋಗ್ಯಕರ ಸಮಾಜಕ್ಕೆ ಪ್ರೇಮ ವಿವಾಹಗಳು, ಅಂತರ್ಜಾತಿ ಮದುವೆಗಳು ಹೆಚ್ಚಾಗಬೇಕು’ ಎಂದು ಆಶಿಸಿದರು.
ಕುವೆಂಪು ಅವರ ಮಂತ್ರ ಮಾಂಗಲ್ಯ ಮದುವೆಯ ಪ್ರಮಾಣವಚನ ಬೋಧಿಸಿದ ಮಾನವ ಮಂಟಪದ ಸಂಚಾಲಕ ಕಾಳಚನ್ನೇಗೌಡ, ‘ಅಂತರ್ಜಾತಿ ಮದುವೆಗಳನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಹಿಂದೆ ಇದ್ದಷ್ಟು ವಿರೋಧವಿಲ್ಲ. ಸುತ್ತೂರು, ಧರ್ಮಸ್ಥಳ, ಆದಿಚುಂಚನಗಿರಿ ಮಠಗಳಲ್ಲಿ ಸರಳ ಮದುವೆಗಳಾಗುತ್ತಿವೆ. ಸರಳವಾಗಿ ಮದುವೆಯಾದರೆ ಜನರು ಹೀಯಾಳಿಸುತ್ತಾರೆ ಎಂಬ ಯೋಚನೆ ಬಿಡಬೇಕು’ ಎಂದು ಸಲಹೆ ನೀಡಿದರು.
ಲೇಖಕ ಮುಜಾಫರ್ ಅಸ್ಸಾದಿ, ಕವಯಿತ್ರಿ ಲತಾ ಮೈಸೂರು, ಲೇಖಕ ಹೊರೆಯಾಲ ದೊರೆಸ್ವಾಮಿ, ನಿವೃತ್ತ ಕನ್ನಡ ಪ್ರಾಧ್ಯಾಪಕ ಭೂಮಿಗೌಡ, ಧನಂಜಯ ಎಲಿಯೂರು ಮಾತನಾಡಿದರು.
ರಮ್ಯಾ ಅವರ ತಾಯಿ ಶಾಂತಕುಮಾರಿ, ತಂದೆ ಭುವನೇಶ್ ಹಾಗೂ ರಘು ತಾಯಿ ಭಾಗ್ಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.