
ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ಹಾಗೂ ಹಿಂದೂ ದೇವಾಲಯಗಳ ಮೇಲಿನ ದಾಳಿ ಖಂಡಿಸಿ ಹಿಂದೂ ಸಂಘಟನೆಗಳ ಒಕ್ಕೂಟವು ಪಂಜಿನ ಮೆರವಣಿಗೆ ನಡೆಸಿತು
ಮೈಸೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ಹಾಗೂ ಹಿಂದೂ ದೇವಾಲಯಗಳ ಮೇಲಿನ ದಾಳಿ ಖಂಡಿಸಿ ಹಿಂದೂ ಸಂಘಟನೆಗಳ ಒಕ್ಕೂಟವು ಪಂಜಿನ ಮೆರವಣಿಗೆ ನಡೆಸಿತು.
ಪುರಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಬಾಂಗ್ಲಾದೇಶದಲ್ಲಿ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಅಂತರರಾಷ್ಟ್ರೀಯ ಸಮೂಹ ಖಂಡಿಸಬೇಕಿದೆ. ಈ ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ನಿಂತು ಮುಕ್ತ ಚುನಾವಣೆ ನಡೆಯುವ ವಾತಾವರಣ ನಿರ್ಮಿಸಲು ಒತ್ತಡ ತರಬೇಕಾಗಿದೆ’ ಎಂದು ಆಗ್ರಹಿಸಿದರು.
‘ದೂರದ ಗಾಜಾ ಪಟ್ಟಿಯಲ್ಲಿ ದಾಳಿಗಳಾಗಿ ಮೃತಪಟ್ಟಾಗ ಭಾರತದಲ್ಲಿನ ಪಟ್ಟ ಭದ್ರ ಹಿತಾಸಕ್ತಿಗಳು ಬೀದಿಗಿಳಿದು ಪ್ರತಿಭಟನೆ, ಮೋಂಬತ್ತಿ ಮೆರವಣಿಗೆ ನಡೆಸುತ್ತಾರೆ. ಆದರೆ ನಮ್ಮ ನೆರೆಯ ದೇಶ ಬಾಂಗ್ಲಾದಲ್ಲಿ ನಡೆಯುತ್ತಿರುವ ದಾಳಿ ಖಂಡಿಸಲು ಮುಂದೆ ಬರುತ್ತಿಲ್ಲ, ಇದು ಅವರ ಜಾತ್ಯತೀತತೆಯ ಸೋಗಲಾಡಿತನವನ್ನು ತೋರಿಸುತ್ತದ’ ಎಂದು ಟೀಕಿಸಿದರು.
ಪುರಭವನದಿಂದ ಆರಂಭವಾದ ಮೆರವಣಿಗೆಯು ದೇವರಾಜ ಮಾರುಕಟ್ಟೆ ಮುಂಭಾಗದ ವಾಸವಿ ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಸಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮುಕ್ತಾಯವಾಯಿತು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅರ್ಜುನ್ ಗುರೂಜಿ, ಹಿಂದೂಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೈ.ಕಾ. ಪ್ರೇಮ್ ಕುಮಾರ್, ಸಹ- ಸಂಚಾಲಕರಾದ ಸಂಜಯ್, ರಾಕೇಶ್ ಭಟ್, ನಂಜನಗೂಡು ಚಂದ್ರು, ಜೀವನ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.