ADVERTISEMENT

ಮೈಸೂರು ಸಾಹಿತ್ಯ ಸಂಭ್ರಮ: ಎಲ್ಲರ ಪ್ರೀತಿಸೋಣ, ಕಲೆ–ಸಾಹಿತ್ಯ ಬೆಳೆಸೋಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 3:19 IST
Last Updated 6 ಜುಲೈ 2025, 3:19 IST
‘ಸುಗಮ ಸಂಗೀತ ಹಾಗೂ ಸಾಹಿತ್ಯ ಕಲರವ’ ಗೋಷ್ಠಿಯಲ್ಲಿ ಸುಗಮ ಸಂಗೀತ ಗಾಯಕಿ ಎಚ್.ಆರ್.ಲೀಲಾವತಿ ಮಾತನಾಡಿದರು. ಬಿ.ಕೆ.ಮೀನಾಕ್ಷಿ, ಶಾಂತಲಾ ಚಂದ್ರಮೌಳಿ ರೆಡ್ಡಿ, ಕುಸುಮಾ ಮೂರ್ತಿ ಹಾಜರಿದ್ದರು
‘ಸುಗಮ ಸಂಗೀತ ಹಾಗೂ ಸಾಹಿತ್ಯ ಕಲರವ’ ಗೋಷ್ಠಿಯಲ್ಲಿ ಸುಗಮ ಸಂಗೀತ ಗಾಯಕಿ ಎಚ್.ಆರ್.ಲೀಲಾವತಿ ಮಾತನಾಡಿದರು. ಬಿ.ಕೆ.ಮೀನಾಕ್ಷಿ, ಶಾಂತಲಾ ಚಂದ್ರಮೌಳಿ ರೆಡ್ಡಿ, ಕುಸುಮಾ ಮೂರ್ತಿ ಹಾಜರಿದ್ದರು   

ಮೈಸೂರು: ‘ಎಲ್ಲರ ಹೃದಯದಲ್ಲಿ ಉಳಿಯುವುದೇ ದೊಡ್ಡ ಪ್ರಶಸ್ತಿ, ದ್ವೇಷಿಸುವವರನ್ನೂ ಪ್ರೀತಿಸೋಣ, ಕಲೆ– ಸಾಹಿತ್ಯ ಬೆಳೆಸೋಣ’ ಎಂದು ಸುಗಮ ಸಂಗೀತ ಗಾಯಕಿ ಎಚ್.ಆರ್.ಲೀಲಾವತಿ ಹೇಳಿದರು.

ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ‘ಸುಗಮ ಸಂಗೀತ ಹಾಗೂ ಸಾಹಿತ್ಯ ಕಲರವ’ ವಿಷಯ ಗೋಷ್ಠಿಯು ಲೀಲಾವತಿ ಅವರ ಬದುಕನ್ನು ಅನಾವರಣಗೊಳಿಸಿತು. 22ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನೂ ಬರೆದು, ತಮ್ಮ ರಚನೆಯ ಗೀತೆಗಳಿಗೆ ತಾವೇ ದನಿಯಾದ ಕಥೆಗಳನ್ನು ಹಂಚಿಕೊಂಡರು. ಹಾಡುವ ಕೋಗಿಲೆ ಹಾಡು ಬರೆಯಬಾರದೇಕೆ ಎಂಬ ಪ್ರಶ್ನೆಗೆ ಉತ್ತರವಾದರು.

‘ನಮ್ಮದು ಸಂಗೀತದ ಕುಟುಂಬವಾಗಿತ್ತು. ತಾಯಿ ಕರ್ನಾಟಕ ಸಂಗೀತ, ತಂದೆ ಗಮಕ ವಾಚನ, ರಂಗಗೀತೆಗಳ ಗಾಯಕ, ಸಹೋದರರೂ ಸಾಹಿತ್ಯ ಓದುಗರು. ಪತಿ ರಘುರಾಮ್ ಕೂಡ ಗಾಯಕರಾಗಿದ್ದು ನಾನು ಸಂಗೀತಕ್ಕೆ ಸಮಯ ನೀಡಲು ಸಾಧ್ಯವಾಯಿತು. ಈಗ ಮಗನೂ ಸಹಕಾರ ನೀಡುತ್ತಿದ್ದು ನಾನು ಹಾಡಿರುವ ಹಾಡುಗಳನ್ನು ಯ್ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿದ್ದಾನೆ’ ಎಂದು ತಿಳಿಸಿದರು.

ADVERTISEMENT

‘ದೇಶದ ಎಲ್ಲಾ ಆಕಾಶವಾಣಿಯಲ್ಲಿಯೂ ಹಾಡಿ ರೆಕಾರ್ಡ್ ಆಗಿರುವ ಗಾಯಕಿ ಬಹುಶಃ ನಾನೊಬ್ಬಳೆ ಇರಬಹುದು. ಮುಂದಿನ ಪೀಳಿಗೆಗೆಗೂ ಸುಗಮ ಸಂಗೀತ ತಿಳಿಸುವ ಉದ್ದೇಶದಿಂದ ಸುಗಮ ಸಂಗೀತ ಅಕಾಡೆಮಿ ಆರಂಭಿಸಿದ್ದು, 4ನೇ ದಶಕಕ್ಕೆ ಕಾಲಿಟ್ಟಿದೆ. ನನ್ನ ಶಿಷ್ಯವೃಂದವು ದೊಡ್ಡದಾಗಿದ್ದು, ಅವರೂ ಸುಗಮ ಸಂಗೀತವನ್ನು ಕಲಿಸುತ್ತಿದ್ದಾರೆ. ಸಂಗೀತ ಹಾಗೂ ಸಾಹಿತ್ಯದ ನಡುವಿನ ಒಡನಾಟ ನನ್ನ ಜೀವನವನ್ನು ರೂಪಿಸಿದೆ’ ಎಂದರು.

ಕುಸುಮಾ ಮೂರ್ತಿ ಮತ್ತು ಶಾಂತಲಾ ಚಂದ್ರಮೌಳಿ ರೆಡ್ಡಿ ಸುಗಮ ಸಂಗೀತ ಹಾಡಿದರು. ಲೇಖಕಿ ಬಿ.ಕೆ.ಮೀನಾಕ್ಷಿ ಗೋಷ್ಠಿ ನಿರ್ವಹಿಸಿದರು.

‘ಸುದ್ದಿಮನೆಯ ಒತ್ತಡಗಳು ಮತ್ತು ಕಾನೂನು ಪ್ರಜ್ಞೆ’ ಗೋಷ್ಠಿಯಲ್ಲಿ ಪತ್ರಕರ್ತರಾದ ಕೂಡ್ಲಿ ಗುರುರಾಜ್‌, ಟಿ.ಆರ್.ಸತೀಶ್ ಕುಮಾರ್, ವಕೀಲೆ ಅಂಜಲಿ ರಾಮಣ್ಣ ಮಾತನಾಡಿದರು. ಪತ್ರಕರ್ತೆ ಪ್ರೀತಿ ನಾಗರಾಜ್‌ ಗೋಷ್ಠಿ ನಿರ್ವಹಿಸಿದರು. ‘ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಕಾನೂನಿನ ಅರಿವು ಅಗತ್ಯ’ ಎಂಬುದನ್ನು ಗೋಷ್ಠಿ ಧ್ವನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.