ಮೈಸೂರು: ಜಿಲ್ಲೆಯಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು, ಬಿಸಿಲಿನ ಝಳವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ತಾಪ ಹೆಚ್ಚಿತ್ತು. ಸೆಖೆಯ ವಾತಾವರಣದಿಂದ ಜನರು ಬಸವಳಿದಿದ್ದರು. ಸಂಜೆ ಹೊತ್ತಿಗೆ ದಟ್ಟ ಮೋಡಗಳು ಆವರಿಸಿದವು. ರಾತ್ರಿ ವೇಳೆಗೆ ಮಿಂಚು ಗುಡುಗು ಸಹಿತ ಜೋರು ಮಳೆಯಾಯಿತು.
ಮೈಸೂರು ತಾಲ್ಲೂಕಿನ ಜಯಪುರದಲ್ಲಿ ಗಾಳಿ ಸಹಿತ ಮಳೆ ಸುಮಾರು 1.6 ಸೆಂ.ಮೀನಷ್ಟು ಸುರಿಯಿತು.
ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ. 5 ಸೆಂ.ಮೀನಷ್ಟು ಇಲ್ಲಿ ಮಳೆ ಬಿದ್ದಿದ್ದರೆ, ಕೆ.ಆರ್.ನಗರ ತಾಲ್ಲೂಕಿನಲ್ಲಿ 3.8, ತಿ.ನರಸೀಪುರ ತಾಲ್ಲೂಕಿನಲ್ಲಿ 2.8, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 2.7 ಸೆಂ.ಮೀನಷ್ಟು ಮಳೆ ಭಾನುವಾರ ರಾತ್ರಿ 9 ಗಂಟೆಯವರೆಗೆ ಆಗಿತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಚಿಲ್ಕುಂದ ಗ್ರಾಮದಲ್ಲಿ ಮಳೆಗೆ ಹಲವು ಮನೆಗಳ ಚಾವಣಿಗಳು ಹಾರಿಹೋಗಿವೆ. ಹಲವು ಮರಗಳು ಧರೆಗುರುಳಿವೆ. ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ತೆಂಗು, ಅಡಿಕೆ ಮರಗಳು ನೆಲಕಚ್ಚಿವೆ.
ಜೋರು ಮಳೆಗೆ ಗುಲ್ಮೊಹರ್ ಮರದಲ್ಲಿ ಅರಳಿದ್ದ ಹೂಗಳು ಬಿದ್ದು, ರಸ್ತೆಯಲ್ಲಿ ಕೆಂಪು ಹಾಸಿಗೆ ಹಾಸಿದಂತೆ ಕಂಡಿತು. ನಗರದಲ್ಲಿ ತಂಪಾದ ವಾತಾವರಣ ಮೂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.