
ಮೈಸೂರು: ಪ್ರಸ್ತಾವಿತ ‘ಬೃಹತ್ ಮೈಸೂರು’ ಮಹಾನಗರ ಪಾಲಿಕೆ ವಿಸ್ತರಣೆ ಸಂಬಂಧ ಸರ್ಕಾರವು ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆದು, ವೈಜ್ಞಾನಿಕ ಹಾಗೂ ಜನಸಹಭಾಗಿತ್ವದ ಮೂಲಕ ಬೃಹತ್ ಮೈಸೂರು ಮಹಾನಗರಪಾಲಿಕೆ ರಚಿಸಬೇಕು’ ಎಂದು ಪ್ರಜ್ಞಾವಂತ ನಾಗರಿಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಒಕ್ಕೂಟವು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಭವಿಷ್ಯದರ್ಶಿ ಮಹಾ ಮೈಸೂರು ಸಂಘಟನೆಯ ಸಂಸ್ಥಾಪಕ ಡಾ. ಸುಶ್ರುತ ಗೌಡ ನೇತೃತ್ವದ ತಂಡವು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಕೆ.ಡಿ. ಶೈಲಾ ಅವರಿಗೆ ಆಕ್ಷೇಪಣೆ ಸಲ್ಲಿಸಿತು.
‘ನಾವು ಅಭಿವೃದ್ಧಿಗೆ ವಿರುದ್ಧವಾಗಿಲ್ಲ. ನಗರಗಳು ಬೆಳೆಯಬೇಕು ಮತ್ತು ಮೂಲಸೌಕರ್ಯಗಳು ಸುಧಾರಿಸಬೇಕು. ಆದರೆ ಪ್ರಸ್ತುತ ಹೊರಡಿಸಲಾಗಿರುವ ಪ್ರಸ್ತಾವನೆಯಲ್ಲಿ ಪಾರದರ್ಶಕತೆ ಮತ್ತು ಸಮರ್ಪಕ ಸಿದ್ಧತೆಯ ಕೊರತೆಯಿದೆ. ಈ ವಿಸ್ತರಣೆಯನ್ನು ಹಂತ ಹಂತವಾಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಯೋಜಿಸಬೇಕು’ ಎಂದು ಸುಶ್ರುತ ಗೌಡ ಆಗ್ರಹಿಸಿದರು.
ಮೈಸೂರು ಗ್ರಾಹಕರ ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಡಾ. ಭಾಮಿ ಶೆಣೈ, ‘ಯೋಜನೆಯ ಪರಿಸರ ಪರಿಣಾಮಗಳ ಮೌಲ್ಯಮಾಪನ ನಡೆದಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳಿಲ್ಲದೆ ಈ ಯೋಜನೆಯನ್ನು ಜಾರಿಗೆ ತಂದರೆ ಕೆರೆಗಳು, ಜೌಗು ಪ್ರದೇಶಗಳು, ಹಸಿರು ವಲಯಗಳು ಮತ್ತು ವನ್ಯಜೀವಿ ಕಾರಿಡಾರ್ಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಮೈಸೂರು ಫೌಂಡೇಶನ್, ಕ್ರಿಸ್ಟಲ್ ಗ್ರೀನ್ ಬಡ್ಸ್, ಕ್ರೆಡಿಟ್-ಐ ಸಂಸ್ಥೆ, ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಮಿತಿ, ಕನ್ನಡ ರಕ್ಷಣಾ ವೇದಿಕೆ, ಮೈಸೂರು ಗ್ರಾಹಕರ ಪರಿಷತ್ತು, ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್, ಯೂತ್ ಫಾರ್ ನೇಷನ್ ಹಾಗೂ ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.