
ಮೈಸೂರು: ‘ಜನರೊಂದಿಗೆ ಜನತಾದಳ ಕಾರ್ಯಕ್ರಮ ಫೆ.18ರಂದು ಬೆಳಿಗ್ಗೆ 11ಕ್ಕೆ ಪಿರಿಯಾಪಟ್ಟಣದಿಂದ ಆರಂಭವಾಗಲಿದೆ’ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆಯುತ್ತಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಮರಳಿ ತರುವ ಸಂಕಲ್ಪ ಮಾಡಲಾಗಿದೆ. 22ರಂದು ಸಂಜೆ 4ಕ್ಕೆ ಕೆ.ಆರ್.ನಗರ, 24ರಂದು ತಿ.ನರಸೀಪುರ, 25ರಂದು ಬೆಳಿಗ್ಗೆ 11ಕ್ಕೆ ಹುಣಸೂರಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಎಚ್.ಡಿ.ಕೋಟೆ, ವರುಣ, ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮಗಳನ್ನು ಸದ್ಯದಲ್ಲಿಯೇ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.
‘ಜನರು ಈಗಾಗಲೇ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ. ಗುತ್ತಿಗೆದಾರರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ಇಲ್ಲವಾಗಿದೆ. ಎಲ್ಲ ನಿಗಮಗಳ ಅಧ್ಯಕ್ಷರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಬೆಲೆ ಏರಿಕೆ ತಡೆಯುವುದನ್ನು ಬಿಟ್ಟು ಶಾಸಕರ ಪ್ರವಾಸ ಆಯೋಜಿಸಿ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ’ ಎಂದು ದೂರಿದರು.
‘ರಾಜ್ಯದ ಸಾಲ ₹ 7 ಲಕ್ಷ ಕೋಟಿ ದಾಟಿದೆ. ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡರೆಂಬುದು ಮುಖ್ಯ. ಡಿ.ದೇವರಾಜ ಅರಸು ಎಲ್ಲರಿಗೂ ಭೂಮಿ ನೀಡಿದರು. ಸಿದ್ದರಾಮಯ್ಯ ಅವರು ಸಾಲದ ಹೊರೆ ಹಾಕಿದ್ದಾರೆ. ಜನಸಾಮಾನ್ಯರ ಜೀವನ ದುಬಾರಿಯಾಗಿದೆ’ ಎಂದರು.
‘ಮನೆಯಲ್ಲೊಬ್ಬರು ಮುಖ್ಯಮಂತ್ರಿ ಆಗಿದ್ದರಿಂದ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರೊಬ್ಬರನ್ನು ಪರಿಷತ್ ಸದಸ್ಯರನ್ನಾಗಿ ಮಾಡಬಹುದಿತ್ತು. ಆದರೆ, ಪುತ್ರನನ್ನೇ ಆ ಸ್ಥಾನದಲ್ಲಿ ಕೂರಿಸಿದರು’ ಎಂದು ಟೀಕಿಸಿದ ಅವರು, ‘ಮೂರು ವರ್ಷವಾದರೂ ಬಡವರಿಗೆ ಮನೆ ಕೊಟ್ಟಿಲ್ಲ. ತವರು ಜಿಲ್ಲೆಯಲ್ಲಾದರೂ ಸೂರು ವಿತರಿಸಲಿ’ ಎಂದು ಒತ್ತಾಯಿಸಿದರು.
ಶಾಸಕ ಜಿ.ಡಿ.ಹರೀಶ್ ಗೌಡ, ‘ಜನರೊಂದಿಗೆ ಜನತಾದಳ ಕಾರ್ಯಕ್ರಮದ ಮೂಲಕ ನಿಖಿಲ್ ಅವರು ರಾಜ್ಯದಾದ್ಯಂತ ಈಗಾಗಲೇ 9 ಸಾವಿರ ಕಿ.ಮೀ. ಕ್ರಮಿಸಿ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಗೊಳಿಸಿದ್ದಾರೆ. ಮೈಸೂರಿನಲ್ಲಿ ನಡೆಯುವ ಅಭಿಯಾನದಲ್ಲಿ ಅಭಿಮಾನಿಗಳು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು' ಎಂದು ಕೋರಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಅಶ್ವಿನ್ ಕುಮಾರ್, ನಗರ ಘಟಕದ ಅಧ್ಯಕ್ಷ ಎಸ್.ಬಿ.ಎಂ. ಮಂಜುನಾಥ್, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಮಹದೇವ್, ಭಾಗ್ಯಮ್ಮ, ದ್ವಾರಕೀಶ್, ಅಭಿಷೇಕ್, ಎಂ.ರವಿ ಪಾಲ್ಗೊಂಡಿದ್ದರು.
ಎಂಡಿಎದಲ್ಲಿ ಸಿಹಿ ವಿತರಣೆ:
ಆರೋಪ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಾಹನಗಳು ಚೆನ್ನಾಗಿದ್ದರೂ ಅವುಗಳನ್ನು ಹರಾಜಿನ ಮೂಲಕ ಗುಜರಿಗೆ ಹಾಕಲಾಗಿದೆ. ಪ್ರಾಧಿಕಾರದಲ್ಲಿ ಜನರ ಕೆಲಸ ನಡೆಯುತ್ತಿಲ್ಲ. ಆರ್ಟಿಐ ಕಾರ್ಯಕರ್ತರೊಬ್ಬರು ಎಂಡಿಎದಲ್ಲಿ ಸಿಹಿ ಹಂಚುವ ಕೆಲಸ ಮಾಡಿದ್ದಾರೆ. ಅವರಿಗೆ ಅವಕಾಶವಿದೆಯೇ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ’ ಎಂದು ಸಾ.ರಾ.ಮಹೇಶ್ ಪ್ರಶ್ನಿಸಿದರು. ‘ಕೆರೆ ಒತ್ತುವರಿ ಜಿಲ್ಲೆಯಾದ್ಯಂತ ನಡೆದಿದೆ. ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.