ಮೈಸೂರು: ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿ ಜಂಬೂಸವಾರಿ ವೀಕ್ಷಿಸಲು ಜನರು ಏರಿದ್ದ ಮರದ ರೆಂಬೆಯು ತುಂಡಾಗಿ ಪ್ರಕಾಶ್ ಎಂಬ ವ್ಯಕ್ತಿ ಗಾಯಗೊಂಡರು.
ಉದ್ಬೂರಿನಿಂದ ಪುತ್ರಿಯೊಂದಿಗೆ ಬಂದಿದ್ದ ಇವರು ಲಯನ್ಸ್ ಸಂಸ್ಥೆಯವರು ಹಾಕಿದ್ದ ಶಾಮಿಯಾನದ ಕೆಳಗೆ ಕುಳಿತಿದ್ದರು. ಭಾರ ತಾಳಲಾರದೇ ರೆಂಬೆಯು ಮುರಿಯುತ್ತಿದ್ದಂತೆ ಮೇಲೇರಿದ್ದ ಯುವಕರು ಕೆಳಗೆ ಹಾರಿ ಪಾರಾದರು. ಮುರಿದ ರೆಂಬೆಯು ಶಾಮಿಯಾನದ ಮೇಲೆ ಬಿತ್ತು. ಇಷ್ಟರಲ್ಲಿ ಶಾಮಿಯಾನದ ಕೆಳಗೆ ಕುಳಿತಿದ್ದವರು ಚಿಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಪ್ರಕಾಶ್ ಗಾಯಗೊಂಡರು.
ಎದೆ ಮತ್ತು ಹೊಟ್ಟೆ ಭಾಗದಲ್ಲಿ ಆದ ಗಾಯಗಳಿಂದ ನರಳುತ್ತಿದ್ದ ಇವರನ್ನು ಅಗ್ನಿಶಾಮಕ ಪಡೆಯ ರಕ್ಷಣಾ ತಂಡ ತಕ್ಷಣವೇ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿತು. ಇವರ ಪುತ್ರಿಯ ರೋದನ ಮುಗಿಲುಮುಟ್ಟಿತ್ತು.
ಶಿಥಿಲಗೊಂಡಿರುವ ಲ್ಯಾನ್ಸ್ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಕಟ್ಟಡದ ಮೇಲೆ ಈ ಬಾರಿಯೂ ಪ್ರಾಣದ ಹಂಗನ್ನು ತೊರೆದ ಜನರು ನೂರಾರು ಸಂಖ್ಯೆಯಲ್ಲಿ ಏರಿ ಜಂಬೂಸವಾರಿ ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.