ADVERTISEMENT

ಮೈಸೂರು: ರಫ್ತು ಕೇಂದ್ರದ ಕಾಮಗಾರಿಗೆ ಮರುಜೀವ

ನೆಲಮಹಡಿ ನಿರ್ಮಾಣದ ಬಳಿಕ ಸ್ಥಗಿತಗೊಂಡಿದ್ದ ಕಾಮಗಾರಿ

ಶಿವಪ್ರಸಾದ್ ರೈ
Published 5 ಡಿಸೆಂಬರ್ 2025, 5:17 IST
Last Updated 5 ಡಿಸೆಂಬರ್ 2025, 5:17 IST
ಮೈಸೂರು ಕೈಗಾರಿಕೋದ್ಯಮಿಗಳ ಸಂಘದ ನೇತೃತ್ವದಲ್ಲಿ ಹೆಬ್ಬಾಳದ ಶೇಷಾದ್ರಿಪುರಂ ಕಾಲೇಜಿನ ಬಳಿ ನಿರ್ಮಿಸುತ್ತಿರುವ ರಫ್ತು ವಹಿವಾಟು ಕೇಂದ್ರದ ಕಾಮಗಾರಿ 
ಮೈಸೂರು ಕೈಗಾರಿಕೋದ್ಯಮಿಗಳ ಸಂಘದ ನೇತೃತ್ವದಲ್ಲಿ ಹೆಬ್ಬಾಳದ ಶೇಷಾದ್ರಿಪುರಂ ಕಾಲೇಜಿನ ಬಳಿ ನಿರ್ಮಿಸುತ್ತಿರುವ ರಫ್ತು ವಹಿವಾಟು ಕೇಂದ್ರದ ಕಾಮಗಾರಿ    

ಮೈಸೂರು: ರಫ್ತು ವಹಿವಾಟಿಗೆ ಒಂದೇ ಸೂರಿನಡಿ ಹಲವು ಸೌಲಭ್ಯ ನೀಡುವ ಉದ್ದೇಶದಿಂದ ಕೈಗಾರಿಕೋದ್ಯಮಿಗಳು ಆರಂಭಿಸಿದ್ದ ‘ಕನಸಿನ ಕಟ್ಟಡ’ ಕಾಮಗಾರಿಗೆ ಮರುಜೀವ ಬಂದಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಸೂಚನೆಯಂತೆ ಕೆಐಡಿಬಿಯು ಕೆಲಸ ಮುಂದುವರಿಸಿದೆ.

ಮೈಸೂರು ಕೈಗಾರಿಕೋದ್ಯಮಿಗಳ ಸಂಘದ (ಐಎಂಎ) ನೇತೃತ್ವದಲ್ಲಿ ಕೈಗಾಕೋದ್ಯಮಿಗಳು ಹೆಬ್ಬಾಳದ ಶೇಷಾದ್ರಿಪುರಂ ಕಾಲೇಜಿನ ಬಳಿ ‘ರಫ್ತು ವಹಿವಾಟು ಕೇಂದ್ರದ’ ಕಟ್ಟಡದ ಕೆಲಸವನ್ನು 2014ರಲ್ಲಿ ಆರಂಭಿಸಿದ್ದರು. ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದವರು ನೆಲಮಹಡಿಯ ಕಾಮಗಾರಿಯನ್ನಷ್ಟೆ ಪೂರ್ಣಗೊಳಿಸಿ ಕಾಮಗಾರಿ ನಿಲ್ಲಿಸಿದ್ದರು.

ಈ ಬಗ್ಗೆ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರ ಗಮನಸೆಳೆದು, ಅನುದಾನ ನೀಡಲು ವಿನಂತಿಸಿದ್ದರು. ಯೋಜನೆಗಾಗಿ ಕೇಂದ್ರ ಸರ್ಕಾರವು ₹ 3 ಕೋಟಿ, ರಾಜ್ಯ ಸರ್ಕಾರ ₹ 1 ಕೋಟಿ ಅನುದಾನ ನೀಡಿದ್ದು, ಸಂಘಟನೆಯು ₹50 ಲಕ್ಷ ವೆಚ್ಚ ಮಾಡಿದೆ. ರಫ್ತು ವಲಯ ಬೆಳೆಯುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಯುವ ಅನಿವಾರ್ಯತೆಯಿದೆ.

ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣದ ಯೋಜನೆ ಇದಾಗಿದ್ದು, ರಫ್ತು ವಹಿವಾಟಿಗೆ ಉತ್ತೇಜನ ನೀಡಿ, ಪ್ರಮಾಣ ಹೆಚ್ಚಿಸಿ ಉದ್ಯೋಗದ ಅವಕಾಶಗಳು ಸೃಷ್ಟಿಸುವ ಉದ್ದೇಶವಿದೆ. ನಗರದ ಕೈಗಾರಿಕಾ ವಲಯವು ಶೀಘ್ರವಾಗಿ ಬೆಳೆಯುತ್ತಿದ್ದು, ರಫ್ತಿನ ಅವಕಾಶಗಳೂ ಹೆಚ್ಚಿವೆ. ‘ಮೈಸೂರು ಬ್ರ್ಯಾಂಡ್’ ಉತ್ಪನ್ನಗಳು ದೇಶ– ವಿದೇಶದಲ್ಲಿ ಸದ್ದು ಮಾಡುತ್ತಿವೆ. ಇವುಗಳಿಗೆ ವೇದಿಕೆಯಾಗಿ ರಫ್ತು ಕೇಂದ್ರ ಕಾರ್ಯಾಚರಿಸುವ ಸಾಧ್ಯತೆಯಿದ್ದು, ಸರ್ಕಾರಗಳೂ ಈ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಜೊತೆಯಾಗಬೇಕಿದೆ. 

ಅನುದಾನದ ನಿರೀಕ್ಷೆ: ‘ಕಟ್ಟಡಕ್ಕೆ ರಾಜ್ಯ ಸರ್ಕಾರವು ₹2 ಕೋಟಿ ಅನುದಾನ ನೀಡಬೇಕಿದೆ. ಅದನ್ನು ನೀಡಿದರೆ ಕೆಲಸ ಮತ್ತಷ್ಟು ವೇಗ ಪಡೆಯಲಿದೆ’ ಎಂದು ಕೈಗಾರಿಕೋದ್ಯಮಿಗಳ ಸಂಘದ ಸುರೇಶ್‌ ಜೈನ್‌ ತಿಳಿಸಿದರು.

‘ರಪ್ತು ಚಟುವಟಿಕೆಗೆ ವೇದಿಕೆ’ 

‘ಉದ್ಯಮಿಗಳು ಒಂದೇ ಕೇಂದ್ರದಲ್ಲಿ ಎಲ್ಲ ಇಲಾಖೆಗಳ ಅನುಮತಿ ಪಡೆದು ರಫ್ತು ವಹಿವಾಟು ನಡೆಸಲು ಉದ್ದೇಶಿಸಲಾಗಿದೆ. ‌ರಫ್ತು ಆಮದು ನೀತಿಗೆ ಸಂಬಂಧಿಸಿದ ನಿಯಮಗಳು ಯೋಜನೆಗಳು ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿರುವ ಅವಕಾಶಗಳು ದ್ವಿಪಕ್ಷೀಯ ವಹಿವಾಟು ಒಪ್ಪಂದ ಮೊದಲಾದವುಗಳ ಮಾಹಿತಿ ಕೇಂದ್ರ ರೂಪಿಸಲಾಗುವುದು’ ಎಂದು ಸಂಘದ ಕಾರ್ಯದರ್ಶಿ ಸುರೇಶ್‌ ಜೈನ್‌ ತಿಳಿಸಿದರು. ‘ರಫ್ತು ವಹಿವಾಟಿನ ಕುರಿತು ಮಾರ್ಗದರ್ಶನ ಹಾಗೂ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಗುಣಮಟ್ಟ ಪರೀಕ್ಷೆಗೆ ಕೇಂದ್ರದ ವ್ಯವಸ್ಥೆ ಕೈಗಾರಿಕಾ ತರಬೇತಿ ಕೇಂದ್ರ ಗ್ರಂಥಾಲಯ ವಾಚನಾಲಯ ಹಾಗೂ ಮಾಹಿತಿ ಸಂಗ್ರಹ ವಿಭಾಗ ನಿರ್ಮಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.