ವಿದ್ವಾನ್ ಟಿ.ಎಂ.ಕೃಷ್ಣ
ಮೈಸೂರು: ಇಲ್ಲಿನ ವಾಣಿವಿಲಾಸ ಮೊಹಲ್ಲಾದ 8ನೇ ಅಡ್ಡರಸ್ತೆ ಬೀದಿಯು ಗಣೇಶ ಉತ್ಸವದೊಂದಿಗೆ 64ನೇ ‘ಪಾರಂಪರಿಕ ಸಂಗೀತೋತ್ಸವ’ಕ್ಕೂ ಸಜ್ಜಾಗುತ್ತಿದೆ.
ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್ಪಿವಿಜಿಎಂಸಿ ಟ್ರಸ್ಟ್)ನಿಂದ 1962ರಲ್ಲಿ ಆರಂಭವಾದ ಸಂಗೀತೋತ್ಸವವು ಈ ಬಾರಿ ಆ.27ರಿಂದ ಸೆ.8ರವರೆಗೆ ನಡೆಯಲಿದ್ದು, 13 ದಿನವೂ ವಿವಿಧ ಸಂಗೀತ ಉತ್ಸವ, ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ ಕಳೆಗಟ್ಟಲಿದೆ.
ಮೇಲುಕೋಟೆ ನಾಗೇಶ್ ಅವರ ನಾದಸ್ವರದಿಂದ ಆರಂಭವಾಗುವ ಉತ್ಸವವು ಕಲಾ ರಸಿಕರಿಗೆ ನಿರಂತರ ಹಬ್ಬದೌತಣ ನೀಡಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ವಿದ್ವಾನ್ ಟಿ.ಎಂ.ಕೃಷ್ಣ, ಅಕ್ಕರೈ ಶುಭಲಕ್ಷ್ಮಿ, ಅಕ್ಕರೈ ಸ್ವರ್ಣಲತಾ ಸಹೋದರಿಯರ ದ್ವಂದ್ವ ಗಾಯನ, ರಾಹುಲ್ ವೆಲ್ಲಾಲ್, ಪೃಥ್ವಿ ಭಾಸ್ಕರ್, ಶೇರ್ತಲೈರಂಗನಾಥ ಶರ್ಮಾ, ಅಭಿಷೇಕ್ ರಘುರಾಮ್ ಅವರಿಂದ ಗಾಯನ ಸುಧೆ ಹರಿಯಲಿದೆ.
ಉತ್ಸವದಲ್ಲಿ ನಾದಸ್ವರ– ವಯೊಲಿನ್ ಜುಗಲ್ಬಂದಿ, ದಂದ್ವ ವಯೊಲಿನ್ ವಾದನ, ಗಾಯನವೂ ಇದೆ. ನೆಮ್ಮಾರ ಕಣ್ಣನ್ ಮತ್ತು ಆನಂದ ಬ್ರಹ್ಮ ಹಾಗೂ ಅಕ್ಕರೈ ಶುಭಲಕ್ಷ್ಮಿ ಅವರಿಂದ ನಾದಸ್ವರ– ವಯೊಲಿನ್ ಮೋಡಿ ನಡೆಯಲಿದೆ. ವಿಠ್ಠಲ ರಾಮಮೂರ್ತಿ, ಪದ್ಮ ಶಂಕರ್ ದ್ವಂದ್ವ ವಯೊಲಿನ್ ವಾದನವು ಮೈ ನವಿರೇಳಿಸಲಿದೆ. ಚಂದ್ರಶೇಖರ್ ಆಚಾರ್ ಅವರಿಂದ ರಂಗಗೀತೆಗಳು, ಸುನೀತಾ ಚಂದ್ರಕುಮಾರ್ ನೇತೃತ್ವದಲ್ಲಿ ಇಲ್ಲಿನ ರಘುಲೀಲಾ ಸಂಗೀತ ಮಂದಿರದ ವಿದ್ಯಾರ್ಥಿಗಳಿಂದ ಜಾನಪದ ಗೀತೆಗಳು, ಸೆ.1ರಿಂದ ಆರಂಭವಾಗುವ ಗಮಕ ಪ್ರಸ್ತುತಿಯು ಪ್ರತಿದಿನವೂ ವಿಶೇಷ ವಿಷಯಗಳನ್ನು ಉಣಬಡಿಸಲಿದೆ.
ಕ್ಯಾಸ್ಕೇಡ್ ಆಫ್ ಮೆಲೋಡಿ ಮತ್ತು ರಿದಂ ಶೀರ್ಷಿಕೆಯಲ್ಲಿ ಸೆ.7ರಂದು ನಡೆಯುವ ಗಾಯನ ಕಛೇರಿಯಲ್ಲಿ ವಿನಯ್ ಶರ್ವ ಗಾಯನಕ್ಕೆ ಮನ್ನಾರ್ಗುಡಿ ವಿ.ಶಂಕರರಾಮನ್ ಹಾರ್ಮೋನಿಯಂ, ಅಮಿತ್ ನಾಡಿಗ್ ಕೊಳಲು, ಉಮಾಯಾಳಪುರಂ ಕೆ.ಶಿವರಾಮನ್ ಮೃದಂಗ, ಭಾರದ್ವಾಜ್ ಆರ್.ಸಾತವಲ್ಲಿ– ಮೋರ್ಚಿಂಗ್, ಅರುಣ್ ಕುಮಾರ್ ರಿದಂ ಪ್ಯಾಡ್ ಸಹಕಾರ ನೀಡಲಿದ್ದು, ಈ ಬಾರಿಯ ವಿಶೇಷ ಕಛೇರಿಯಾಗಿ ಗಮನ ಸೆಳೆಯಲಿದೆ.
‘ಮೊಹಲ್ಲಾದ ಮಹಾಲಿಂಗು, ರಘೋತ್ತಮ ದಾಸ, ಜಿ.ಟಿ.ಸುಬ್ಬರಾವು, ಶ್ರೀರಾಮ ಅಯ್ಯಂಗಾರ್, ನಂಜಪ್ಪ, ಸೌಂದರ್ಯಮ್ಮ ವೆಂಕಟೇಶ್, ನಾಗಮ್ಮ 1962ರಲ್ಲಿ ಮೊದಲ ಗಣೇಶ ಉತ್ಸವ ನಡೆಸಲು ನಿರ್ಧರಿಸಿದ್ದರು. ಇವರಲ್ಲಿ ನನ್ನ ತಾಯಿ ರಾಜಮ್ಮ ಸಿ.ಆರ್.ಗೌಡ ಕೂಡ ಇದ್ದರು. 1985ರಲ್ಲಿ ಟ್ರಸ್ಟ್ ರಚನೆ
ಯಾಯಿತು’ ಎಂದು ಟ್ರಸ್ಟ್ ಕಾರ್ಯದರ್ಶಿ ಸಿ.ಆರ್.ಹಿಮಾಂಶು ‘ಪ್ರಜಾವಾಣಿ’ಗೆ ತಿಳಿಸಿದರು.
ಕಲಾಸಕ್ತರ ನಿರಂತರ ಪ್ರೋತ್ಸಾಹದಿಂದ ಉತ್ಸವ ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರಾಗಿದೆ. ಯುವಜನರು ಈ ಪರಂಪರೆಯನ್ನು ಮುಂದುವರಿಸಬೇಕುಸಿ.ಆರ್.ಹಿಮಾಂಶು ಕಾರ್ಯದರ್ಶಿ ಎಸ್ಪಿವಿಜಿಎಂಸಿ ಟ್ರಸ್ಟ್
ಹಿಮಾಂಶು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.