ಹಣ
ಮೈಸೂರು: ಸೇವಾ ನ್ಯೂನತೆ ಆರೋಪ ಸಾಬೀತಾದ್ದರಿಂದ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯು ದೆಹಲಿಯ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನಿಗೆ ₹4.43 ಕೋಟಿ ಪರಿಹಾರ ನೀಡಬೇಕು ಎಂದು ಮೈಸೂರು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ಪರವಾನಗಿಯುಳ್ಳ ಪವರ್ ಗ್ರಿಡ್ ಕಾರ್ಪೊರೇಷನ್ ತನ್ನ ಪ್ರಸರಣ ಹಾಗೂ ಸ್ಥಾವರ (ಟವರ್ ಟ್ರಾನ್ಸ್ಮಿಷನ್) ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೈದರಾಬಾದಿನ ಮೆ| ಬಿ.ಎಸ್.ಲಿಮಿಟೆಡ್ ಕಂಪನಿಗೆ ನೀಡಿತ್ತು. ಈ ಕಂಪನಿಯು ಟ್ರಾನ್ಸ್ಮಿಷನ್ ಮತ್ತು ಸಂಪೂರ್ಣ ಟವರ್ ಪ್ಯಾಕೇಜ್ ಸಂಬಂಧ 2017ರ ಜೂನ್ 15ರಿಂದ 2018ರ ಡಿಸೆಂಬರ್ 14ರ ಅವಧಿಗೆ ಇನ್ಶುರೆನ್ಸ್ ಕಂಪನಿಯಿಂದ ₹ 22 ಕೋಟಿಗೆ ಮೈಸೂರು ಶಾಖೆಯಲ್ಲಿ ಪಾಲಿಸಿ ಪಡೆದಿತ್ತು. ₹17,05,783 ಪ್ರೀಮಿಯಂ ಮೊತ್ತ ಪಾವತಿಸಿತ್ತು.
ಪಾಲಿಸಿ ಅವಧಿ ಶುರುವಾದ ಜೂನ್ 15ರಂದೇ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಲ್ನಾ ತಾಲ್ಲೂಕಿನ ನಂದಾಪುರ ಮತ್ತು ಥಾರ್ ಗ್ರಾಮಗಳ ನಡುವೆ ನಿರ್ಮಿಸಿದ್ದ ಒಂದು ಟವರ್ ಧ್ವಂಸವಾಗಿತ್ತು. 2018ರ ಸೆಪ್ಟೆಂಬರ್ 8ರಂದು ವಿಪರೀತ ಮಳೆಯಿಂದ ವಾಶಿಂ ಜಿಲ್ಲೆಯ ಶೆಲ್ಗಾಂವ್ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಐದು ಟವರ್ಗಳು ಧ್ವಂಸವಾಗಿದ್ದವು. ಅದರಿಂದ ಕಾರ್ಪೊರೇಷನ್ಗೆ ₹4,43,92,043 ನಷ್ಟ ಉಂಟಾಗಿತ್ತು. ಆದರೆ ಇನ್ಶುರೆನ್ಸ್ ಕಂಪನಿಯು ನಷ್ಟ ಭರಿಸಲಿಲ್ಲ.
ಇನ್ಶುರೆನ್ಸ್ ಕಂಪನಿಯು ಸೇವಾ ನ್ಯೂನತೆ ಎಸಗಿದೆ ಎಂದು ಆಪಾದಿಸಿ ಈ ಮೊತ್ತವನ್ನು ಶೇ 15 ಬಡ್ಡಿಯೊಂದಿಗೆ ಕೊಡಿಸುವುದರ ಜೊತೆಗೆ ₹ 1 ಕೋಟಿ ಪರಿಹಾರ ಕೊಡಿಸಬೇಕೆಂದು ಕಾರ್ಪೊರೇಷನ್ ಸಲ್ಲಿಸಿದ್ದ ದೂರು ಆಧರಿಸಿ ಆಯೋಗ ವಿಚಾರಣೆ ನಡೆಸಿತ್ತು.
ಇನ್ಶುರೆನ್ಸ್ ಕಂಪನಿಯು ₹4,43,92,043ನ್ನು ವಾರ್ಷಿಕ ಶೇ 6 ಬಡ್ಡಿಯೊಂದಿಗೆ 2 ತಿಂಗಳೊಳಗೆ ಕಾರ್ಪೊರೇಷನ್ಗೆ ಪಾವತಿಸಬೇಕು. ತಪ್ಪಿದಲ್ಲಿ ಶೇ 9 ಬಡ್ಡಿಯೊಂದಿಗೆ ಮೊತ್ತವನ್ನು ಪಾವತಿಸಬೇಕು ಎಂದು ಆಯೋಗ ಆದೇಶಿಸಿದೆ. ಸೇವಾ ನ್ಯೂನತೆ ಎಸಗಿ ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ ₹1 ಲಕ್ಷ ದಂಡ, ಪ್ರಕರಣದ ಖರ್ಚು ₹25 ಸಾವಿರವನ್ನು 2 ತಿಂಗಳೊಳಗಾಗಿ ಪಾವತಿಸುವಂತೆಯೂ ಹೇಳಿದೆ. ದೂರುದಾರರ ಪರವಾಗಿ ಕೆ.ಈಶ್ವರ ಭಟ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.