ADVERTISEMENT

ಮೈಸೂರು | ಸಿಲಿಂಡರ್‌ ಸ್ಫೋಟ: ಬಲೂನ್‌ ಮಾರುವ ವ್ಯಕ್ತಿ ಸಾವು, ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:16 IST
Last Updated 26 ಡಿಸೆಂಬರ್ 2025, 3:16 IST
ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ, ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡಿರುವ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು
ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ, ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡಿರುವ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು   

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ, ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ.

ಬಲೂನು ಮಾರುತ್ತಿದ್ದ ಉತ್ತರ ಪ್ರದೇಶದ ಕನೋಜ್ ಜಿಲ್ಲೆ ತೊಫಿಯ ಗ್ರಾಮದ ಸಲೀಂ (40) ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕೋಲ್ಕತ್ತದ ಶಮಿನಾ ಶಬಿಲ್, ರಾಣೆಬೆನ್ನೂರಿನ ಕೊಟ್ರೇಶ್ ಅವರಿಗೆ ಗಾಯವಾಗಿದ್ದು, ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ಷ್ಮಿ ಪರಿಸ್ಥಿತಿ ಗಂಭೀರವಾಗಿದ್ದು, ಐಸಿಯು ವಾರ್ಡ್‌ಗೆ ವರ್ಗಾಯಿಸಲಾಗಿದೆ. ಮತ್ತೊಬ್ಬ ಗಾಯಾಳು ರಂಜಿತಾ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ADVERTISEMENT

‘ವ್ಯಕ್ತಿಯೊಬ್ಬರು ಸೈಕಲ್‌ನಲ್ಲಿ ಬಲೂನ್ ಮಾರುತ್ತಿದ್ದಾಗ ರಾತ್ರಿ 8.30ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡು, ಅವರು ಸ್ಥಳದಲ್ಲೇ ಮೃತಪಟ್ಟರು’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು. 

‘ಸಿಲಿಂಡರ್‌ ಸ್ಫೋಟಗೊಂಡಾಗ ಸ್ಥಳದಲ್ಲಿ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇಬ್ಬರ ದೇಹಗಳು ಛಿದ್ರಗೊಂಡಿದ್ದವು’ ಎಂದು ಪೊಲೀಸರು ತಿಳಿಸಿದರು.

‘ಮೂವರು ಯುವಕರು ಹೊರ ರಾಜ್ಯದಿಂದ ನಗರಕ್ಕೆ ಬಂದು ಮಂಡಿ ಮೊಹಲ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅರಮನೆ ಸುತ್ತಮುತ್ತ ಬಲೂನ್‌ ವ್ಯಾಪಾರ ನಡೆಸುತ್ತಿದ್ದರು. ಸಲೀಂ ಎಂದಿನಂತೆ ಜಯಮಾರ್ತಾಂಡ ದ್ವಾರದ ಬಳಿ ವ್ಯಾಪಾರ ನಡೆಸುತ್ತಿದ್ದಾಗ ಘಟನೆ ನಡೆದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌, ಡಿಸಿಪಿ ಆರ್‌.ಎನ್‌.ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಪರಿಶೀಲನೆ ನಡೆಸಿದರು. 

ತಡವಾಗಿ ಬಂದ ಆಂಬುಲೆನ್ಸ್‌: ‘ಗಾಯಾಳುಗಳನ್ನು ಘಟನಾ ಸ್ಥಳದಿಂದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ ಸಿಗಲಿಲ್ಲ. ಅವು ತಡವಾಗಿ ಬಂದವು. ಪೊಲೀಸರು ಆಟೊ, 112 ಹಾಗೂ ಸಂಜೀವಿನಿ ವಾಹನದಲ್ಲಿ ಗಾಯಾಳುಗಳನ್ನು ಕರೆದೊಯ್ದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಕ್ರಿಸ್ಮಸ್‌ ರಜೆಯ ಕಾರಣ ಲಕ್ಷ್ಮಿ ಅವರು ಇಬ್ಬರು ಮಕ್ಕಳು ಹಾಗೂ ಸಂಬಂಧಿಕರಾದ ರಂಜಿತಾ ಅವರೊಂದಿಗೆ ನಗರಕ್ಕೆ ಬಂದಿದ್ದರು. ಮಕ್ಕಳಿಗೆ ಯಾವುದೇ ಗಾಯವಾಗಿಲ್ಲ
ಸುಹಾಸ್‌ ಲಕ್ಷ್ಮಿ ಪರಿಚಯಸ್ಥರು
ಅರಮನೆಯಲ್ಲಿ ಮಾಗಿ ಉತ್ಸವ ನಡೆಯುತ್ತಿರುವುದರಿಂದ ಜಯಮಾರ್ತಾಂಡ ದ್ವಾರದಲ್ಲಿ ಜನ ಕಡಿಮೆ ಇತ್ತು ಹೀಗಾಗಿ ದೊಡ್ಡ ಅಪಾಯ ತಪ್ಪಿದೆ
ಯೋಗೇಶ್‌ ವ್ಯಾಪಾರಿ
ತಿ ಹಾವೇರಿ ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಗುರುವಾರ ಬೆಳಿಗ್ಗೆ ಕುಟುಂಬ ಸಮೇತರಾಗಿ ಮೈಸೂರಿಗೆ ಪ್ರವಾಸಕ್ಕಾಗಿ ಬಂದಿದ್ದೆವು
ಪ್ರಿಯಾಂಕ ಕೊಟ್ರೇಶ್‌ ಪತ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.