ಮೈಸೂರು: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಸಿರುವುದನ್ನು ಖಂಡಿಸಿ ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟಿಸಿದರು.
ಜಿಲ್ಲಾ ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಕಾರರು ಓಮ್ನಿ ಕಾರಿಗೆ ಹಗ್ಗ ಕಟ್ಟಿ ಎಳೆದರು. ತಲೆ ಮೇಲೆ ಗ್ಯಾಸ್ ಸಿಲಿಂಡರ್ಗಳನ್ನು ಹೊತ್ತರು. ರಸ್ತೆಯಲ್ಲೇ ಸೌದೆ ಒಲೆ ಉರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಮುಖವಾಡ ಹಾಕಿದ್ದ ಕಾರ್ಯಕರ್ತರು ಸಿರಿಂಜುಗಳಲ್ಲಿ ಜನರ ರಕ್ತವನ್ನು ಹೀರುತ್ತಿರುವಂತೆ ಅಣಕು ಪ್ರದರ್ಶಿಸಿದರು.
ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯಾದ್ ಅಬ್ರಾರ್ ಮಾತನಾಡಿ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಬಡವರ ರಕ್ತ ಹೀರುತ್ತಿದೆ. ಇದರ ಬಗ್ಗೆ ಹೋರಾಡಬೇಕಾದ ರಾಜ್ಯ ಬಿಜೆಪಿಯು, ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು ಜನರ ಹಾದಿ ತಪ್ಪಿಸುವ ತಂತ್ರ’ ಎಂದು ಟೀಕಿಸಿದರು.
‘ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದಂದೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ₹2 ಹಾಗೂ ಅಡುಗೆ ಅನಿಲದ ದರವನ್ನು ₹50 ಏರಿಸಿದೆ. ಇದನ್ನೂ ಬಿಜೆಪಿ ಕಾರ್ಯಕರ್ತರು ಸಮರ್ಥಿಸುತ್ತಿರುವುದು ವಿಷಾದನೀಯ’ ಎಂದರು.
ಯುವ ಕಾಂಗ್ರೆಸ್ ಮುಖಂಡರಾದ ಲಖನ್, ದಿಲೀಪ್, ಸಲ್ಮಾನ್, ವಿನೋದ್, ಅದ್ನಾನ್, ಕೆ.ಆರ್.ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ ಮಲ್ಲೇಶ್, ರಾಕೇಶ್, ಕಾರ್ತಿಕ್, ಹೇಮಂತ್, ರಾಜೇಂದ್ರ, ಪವನ್, ವಿನಯ್, ಮೈಸೂರು ಬಸವಣ್ಣ, ಕೆ.ಮಹೇಶ್ ಇದ್ದರು.
ಕಾರಿಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ರಕ್ತ ತುಂಬಿದ ಸಿರಿಂಜು ಪ್ರದರ್ಶನ
‘ಮೋದಿ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ’
ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಮಾತನಾಡಿ ‘ರಾಜ್ಯದಿಂದ ಅತಿಹೆಚ್ಚು ತೆರಿಗೆಯನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರವು ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ನಮ್ಮ ತೆರಿಗೆ ಪಾಲನ್ನು ನೀಡದೆ ದ್ವೇಷದ ರಾಜಕಾರಣ ಮಾಡುತ್ತಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಇಳಿಕೆ ಕಂಡಿದ್ದರೂ ದೇಶದಲ್ಲಿ ಇಂಧನದ ಬೆಲೆ ಏರಿಕೆಸಿರುವುದು ಮೋದಿ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.