ADVERTISEMENT

ತಂಬಾಕು ದರ ಕುಸಿತ | ಬೆಲೆ ಕೊಡಿ ಇಲ್ಲವೇ ಬ್ಯಾನ್ ಮಾಡಿ: ಬೆಳೆಗಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:53 IST
Last Updated 24 ಫೆಬ್ರುವರಿ 2026, 6:53 IST
ಮೈಸೂರಿನ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಡಳಿತ, ತಂಬಾಕು ಮಂಡಳಿ ಹಾಗೂ ಕಾರ್ಖಾನೆ ಪ್ರತಿನಿಧಿಗಳ ಸಭೆಯಲ್ಲಿ ಸಚಿವ ಕೆ. ವೆಂಕಟೇಶ್‌ ಮಾತನಾಡಿದರು ಪ್ರಜಾವಾಣಿ ಚಿತ್ರ
ಮೈಸೂರಿನ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಡಳಿತ, ತಂಬಾಕು ಮಂಡಳಿ ಹಾಗೂ ಕಾರ್ಖಾನೆ ಪ್ರತಿನಿಧಿಗಳ ಸಭೆಯಲ್ಲಿ ಸಚಿವ ಕೆ. ವೆಂಕಟೇಶ್‌ ಮಾತನಾಡಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ಪ್ರತಿ ಕೆ.ಜಿ. ತಂಬಾಕಿಗೆ ಕನಿಷ್ಠ ₹ 300 ಮೇಲ್ಪಟ್ಟು ಬೆಲೆ ನೀಡಿ. ಇಲ್ಲವೇ ತಂಬಾಕು ಬೆಳೆಯನ್ನೇ ನಿಷೇಧ ಮಾಡಿ ಬೆಳೆಗಾರರಿಗೆ ಬ್ಯಾರಲ್‌ಗಿಷ್ಟು ಪರಿಹಾರ ಕೊಡಿ’..

–ಹೀಗೆಂದು ಜಿಲ್ಲೆಯ ತಂಬಾಕು ಬೆಳೆಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ತಂಬಾಕು ಮಂಡಳಿ ಹಾಗೂ ಕಾರ್ಖಾನೆ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ರೈತರು ತಮ್ಮ ಆಕ್ರೋಶ ಹೊರಹಾಕಿದರು.

‘ಪ್ರತಿ ಕೆ.ಜಿ. ತಂಬಾಕು ಉತ್ಪಾದನೆಗೆ ಕನಿಷ್ಠ ₹280–290 ಖರ್ಚಾಗುತ್ತಿದೆ. ಆದರೆ ಸದ್ಯ ರೈತರಿಂದ ಕೆ.ಜಿ.ಗೆ ₹250 ದರದಲ್ಲಿ ಖರೀದಿ ನಡೆದಿದೆ. ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸ್ಪಂದಿಸಬೇಕು. ಉದ್ದೇಶಪೂರ್ವಕವಾಗಿ ಕಡಿಮೆ ದರಕ್ಕೆ ಹರಾಜು ಕೂಗುತ್ತಿದ್ದು, ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಮಧ್ಯ ಪ್ರವೇಶ ಮಾಡಬೇಕು’ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ADVERTISEMENT

‘ಕೇಂದ್ರ ತಂಬಾಕು ಮಂಡಳಿಯು ರೈತರ ಕಷ್ಟಕ್ಕೆ ಸ್ಪಂದಿಸದೇ ಕೈಕಟ್ಟಿ ಕುಳಿತಿದ್ದು, ಐಟಿಸಿ ಕಂಪನಿ ಅಧಿಕಾರಿಗಳ ಜೊತೆಗೆ ಶಾಮೀಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್‌ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

‘ಆಂಧ್ರಪ್ರದೇಶದಲ್ಲಿ ಪ್ರತಿ ಕೆ.ಜಿ. ತಂಬಾಕು ₹470ರವರೆಗೆ ಮಾರಾಟ ಆಗಿದೆ. ಅದಕ್ಕಿಂತ ಗುಣಮಟ್ಟದ ಸೊಪ್ಪು ನಮ್ಮಲ್ಲಿ ಪೂರೈಕೆ ಆಗುತ್ತಿದ್ದು, ದರವು ₹250ಕ್ಕೆ ಕುಸಿದಿದೆ. ರೈತರಿಗೆ ಉತ್ಪಾದನಾ ವೆಚ್ಚವೇ ₹280-290 ಇದೆ. ಮಂಡಳಿ ಅಧಿಕಾರಿಗಳು ಕಂಪನಿ ಜೊತೆ ಶಾಮೀಲಾಗಿ ಪಾರದರ್ಶಕವಾಗಿ ಗ್ರೇಡಿಂಗ್‌ ಪರಿಗಣಿಸುತ್ತಿಲ್ಲ ಎಂಬುದು ರೈತರ ಆರೋಪ. ಐಟಿಸಿ ಕಂಪನಿ ಹರಾಜಿನಲ್ಲಿ ಏಕಸ್ವಾಮ್ಯ ಹೊಂದಿದ್ದು, ಬೇರೆ ಕಂಪನಿಗಳು ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿಲ್ಲ’ ಎಂದು ದೂರಿದರು.

‘ಕಂಪನಿಯವರು ಸರ್ಕಾರ ಹಾಗೂ ಮಂಡಳಿಯ ನಿಯಂತ್ರಣಕ್ಕೆ ಸಿಗದಿದ್ದರೆ ಅವರ ವಿರುದ್ಧ ಜಿಲ್ಲಾಡಳಿತ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಸಮಸ್ಯೆ ಆಲಿಸಿದ ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್‌, ಸಮಸ್ಯೆ ಇತ್ಯರ್ಥಕ್ಕೆ ಐಟಿಸಿ ಕಂಪನಿಗೆ ಒಂದು ದಿನದ ಗಡುವು ನೀಡಿದರು. ಇಲ್ಲವಾದಲ್ಲಿ ಗೋದಾಮು ಜಪ್ತಿ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.

ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌, ‘ಮಂಡಳಿಯವರು ರೈತರ ನೆರವಿಗೆ ನಿಲ್ಲದಿರುವುದು ಬೇಸರದ ಸಂಗತಿ. ಸದ್ಯದಲ್ಲೇ ಆಂಧ್ರ ಮಾರುಕಟ್ಟೆ ತೆರೆಯಲಿದ್ದು, ಅಷ್ಟರಲ್ಲೇ ಕ್ರಮ ಕೈಗೊಳ್ಳಬೇಕು’ ಎಂದರು.

ಶಾಸಕರಾದ ಜಿ.ಡಿ. ಹರೀಶ್‌ ಗೌಡ, ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ರಾಜ್ಯ ರೈತ ಸಂಘ, ಕೇಂದ್ರ ತಂಬಾಕು ಮಂಡಳಿ ಹಾಗೂ ಐಟಿಸಿ ಕಂಪನಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.