ಹುಣಸೂರು: ಹುಲಿ ಸಂರಕ್ಷಿತ ವಲಯ ನಾಗರಹೊಳೆ ಅರಣ್ಯಕ್ಕೆ ಬೇಸಿಗೆಯಲ್ಲಿ ಬೆಂಕಿ ಅನಾಹುತ ತಡೆಯಲು ಅರಣ್ಯ ಇಲಾಖೆಯಿಂದ ಫೈರ್ ಲೈನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
845 ಚದರ ಕಿ.ಮಿ. ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಅಭಯಾರಣ್ಯದಲ್ಲಿ ಹಲವು ಬಾರಿ ಬೆಂಕಿ ಬಿದ್ದಿದ್ದು, ಇದೀಗ ಚೇತರಿಕೆ ಕಂಡಿದೆ. ಅರಣ್ಯದೊಳಗೆ ಹಾಗೂ ಗಡಿ ಭಾಗಗಳಲ್ಲಿ ಫೈರ್ ಲೈನ್ ನಿರ್ಮಾಣ ಮಾಡುವುದರ ಜೊತೆಗೆ ಅರಣ್ಯದಂಚಿನ ಗ್ರಾಮಗಳ ಜನರಿಗೆ ಜಾಗೃತಿ ಮೂಡಿಸಿ ವಿಶ್ವಾಸ ಮೂಡಿಸುತ್ತಿದೆ.
ನಾಗರಹೊಳೆ ಅಭಯಾರಣ್ಯ 2014ರಿಂದ 2019ರವರಗೆ ಬೆಂಕಿಗೆ ಆಹುತಿಯಾಗುತ್ತಿದ್ದು, ನಂತರದಲ್ಲಿ ಇಲಾಖೆ ಕೈಗೊಂಡ ಕ್ರಮದಿಂದಾಗಿ ಚೇತರಿಸಿಕೊಂಡು ಇತ್ತೀಚೆಗೆ ಹಸಿರು ಕಾನನ ಮರುಕಳಿಸಿದೆ. ಅದರ ಸಂರಕ್ಷಣೆ ಜವಾಬ್ದಾರಿ ಇಲಾಖೆ ಹಾಗೂ ಗಡಿಯಂಚಿನ ನಾಗರೀಕ ಸಮುದಾಯದ ಹೆಗಲಿಗೆ ಇದೆ.
‘ನಾಗರಹೊಳೆ ಅರಣ್ಯದಲ್ಲಿ ಒಟ್ಟು 2,549 ಕಿ.ಮೀ ಫೈರ್ ಲೈನ್ ನಿರ್ಮಿಸಿದ್ದು, ಈ ಫೈರ್ ಲೈನ್ ಬಹುತೇಕ ಅರಣ್ಯದಂಚಿನ ಗಡಿಭಾಗ ಹಾಗೂ ರಸ್ತೆ ಅಂಚಿನಲ್ಲಿ ನಿರ್ಮಿಸಲಾಗಿದೆ’ ಎಂದು ನಾಗರಹೊಳೆ ಹುಲಿ ಯೋಜನೆಯ ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದರು.
‘ಬೆಂಕಿ ನಿಯಂತ್ರಣಕ್ಕೆ ಇಲಾಖೆ ಜನವರಿಯಿಂದ ಮಾರ್ಚ್ ಅಂತ್ಯದವರಗೆ ಇಲಾಖೆಯಿಂದ ಹೆಚ್ಚುವರಿಯಾಗಿ 400 ಸಿಬ್ಬಂದಿ ನೇಮಿಸಿಕೊಂಡು 8 ವಲಯಗಳಿಗೆ ನಿಯೋಜಿಸಲಾಗಿದೆ. ಅರಣ್ಯದೊಳಗೆ 35 ವಾಚ್ ಟವರ್ ಹಾಗೂ 30ರಿಂದ 40 ಅಟ್ಟಣಿಗೆ ನಿರ್ಮಿಸಿ ಹಗಲು– ರಾತ್ರಿ ಎರಡು ಪಾಳಿಯಲ್ಲಿ ಮಾಹಿತಿ ನೀಡುವರು. ಇಲಾಖೆ ಗುತ್ತಿಗೆ ಆಧಾರದಲ್ಲಿ ಪಡೆಯುವ ಸಿಬ್ಬಂದಿಗೆ ಪ್ರತಿ ದಿನಕ್ಕೆ ₹ 674 ವೇತನ ಹಾಗೂ ರಕ್ಷಣೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.
‘2025–26ನೇ ಸಾಲಿನ ಬೆಂಕಿ ಅವಘಡ ನಿಯಂತ್ರಣಕ್ಕೆ ಸರ್ಕಾರ ₹ 2.45 ಕೋಟಿ ಅನುದಾನ ನೀಡಿದ್ದು, ಈ ಅನುದಾನವನ್ನು ಸಿಬ್ಬಂದಿ ವೇತನ, ಬೆಂಕಿ ನಿಯಂತ್ರಣಕ್ಕೆ ಬೇಕಾದ ವಾಹನ ಬಳಕೆಗೆ ಇಂಧನ ಖರೀದಿಗೆ ಬಳಸಲು ಸಹಾಯವಾಗಲಿದೆ’ ಎಂದರು.
‘ಅರಣ್ಯದಲ್ಲಿ ಬೆಂಕಿ ಎಲ್ಲಿ ಬಿದ್ದಿದೆ ಎಂಬುದನ್ನು ನಿಖರವಾಗಿ ತಿಳಿಯಲು 2020ರಿಂದ ಡ್ರೋಣ್ ಬಳಸುತ್ತಿದ್ದು, ವೈಮಾನಿಕ ಚಿತ್ರಣ ಸಿಗುವುದರಿಂದ ನಿಖರವಾದ ಸ್ಥಳಕ್ಕೆ ತಲುಪಲು ಸಹಾಯವಾಗುತ್ತಿದೆ. ಬೆಂಕಿ ನಂದಿಸಲು ದ್ವಿಚಕ್ರ ವಾಹನಗಳಿಗೆ ನೀರಿನ ಟ್ಯಾಂಕ್ ಅಳವಡಿಸಿ ಸ್ಪ್ರೇಯರ್ ವ್ಯವಸ್ಥೆ ಮಾಡಿದ್ದೇವೆ’ ಎಂದು ಲಕ್ಷ್ಮಿಕಾಂತ್ ಮಾಹಿತಿ ನೀಡಿದರು.
Quote - ಪ್ರಾಕೃತಿಕ ವೈವಿಧ್ಯಮಯ ಸಂಪನ್ಮೂಲ ಒಳಗೊಂಡಿರುವ ನಾಗರಹೊಳೆ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಅರಣ್ಯದಂಚಿನ ಗ್ರಾಮಸ್ಥರ ವಿಶ್ವಾಸದೊಂದಿಗೆ ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ಎಚ್ಚರವಹಿಸಲು ಇಲಾಖೆ ಸಜ್ಜಾಗಿದೆ. ಲಕ್ಷ್ಮಿಕಾಂತ್ ಎಸಿಎಫ್ ನಾಗರಹೊಳೆ ಹುಲಿ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.