ADVERTISEMENT

ಮೀಸಲಾತಿ ಹೆಚ್ಚಳ ಸರ್ಕಾರದಿಂದ ಐತಿಹಾಸಿಕ ನಿರ್ಣಯ: ಮೇಯರ್ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 15:46 IST
Last Updated 8 ಅಕ್ಟೋಬರ್ 2022, 15:46 IST
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದನ್ನು ಸ್ವಾಗತಿಸಿ ಮೈಸೂರಿನಲ್ಲಿ ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಸಿಹಿ ಹಂಚಿ ಸಮಾಜದವರು ಸಂಭ್ರಮ ಆಚರಿಸಿದರು
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದನ್ನು ಸ್ವಾಗತಿಸಿ ಮೈಸೂರಿನಲ್ಲಿ ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಸಿಹಿ ಹಂಚಿ ಸಮಾಜದವರು ಸಂಭ್ರಮ ಆಚರಿಸಿದರು   

ಮೈಸೂರು: ‘ಪರಿಶಿಷ್ಟ ಪಂಗಡಕ್ಕೆ ನೀಡುತ್ತಿರುವ ಮೀಸಲಾತಿಯನ್ನು ಶೇ.3ರಿಂದ ಶೇ 7ಕ್ಕೆ ಹೆಚ್ಚಿಸಬೇಕೆಂಬ ಸಮಾಜದ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರವು ಐತಿಹಾಸಿಕ ನಿರ್ಣಯ ಮಾಡಿರುವುದು ಸ್ವಾಗತಾರ್ಹವಾಗಿದೆ’ ಎಂದು ಮೇಯರ್ ಶಿವಕುಮಾರ್ ಹೇಳಿದರು.

ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಕ್ರಮ ವಹಿಸಿದ ಹಿನ್ನೆಲೆಯಲ್ಲಿ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸುಣ್ಣದಕೇರಿಯ ಮಲೆಮಹದೇಶ್ವರ ದೇವಸ್ಥಾನದ ಎದುರು ಶನಿವಾರ ನಾಯಕ ಸಮಾಜದವರು ನಡೆಸಿದ ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.

‘ಬೇಡಿಕೆ ಈಡೇರಿಸುವ ಕುರಿತು ಸರ್ವ ಪಕ್ಷಗಳ ಸಭೆಯಲ್ಲಿ ಹೆಚ್ಚಿಸುವ ನಿರ್ಧಾರ ಮಾಡಿದಲ್ಲದೆ, ಸಚಿವ ಸಂಪುಟ ಸಭೆಯಲ್ಲೂ ಅಸ್ತು ಎಂದಿರುವುದು ಸ್ವಾಗತಾರ್ಹವಾಗಿದೆ. ವಾಲ್ಮೀಕಿ ಮಠದ ಸ್ವಾಮೀಜಿಯ ಹೋರಾಟ ಮತ್ತು ಇಡೀ ನಾಯಕ ಸಮಾಜಕ್ಕೆ ಬಿಜೆಪಿ ಸರ್ಕಾರವು ದೊಡ್ಡ ಕೊಡುಗೆಯನ್ನು ನೀಡಿದೆ. ಇದು ಸಮಾಜದವರಲ್ಲಿ ಹರ್ಷ ಉಂಟು ಮಾಡಿದೆ’ ಎಂದು ಹೇಳಿದರು.

ADVERTISEMENT

‘ಪರಿವಾರ, ತಳವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದ ಸರ್ಕಾರವು ಈಗ ಮತ್ತೊಂದು ನಿರ್ಧಾರ ಕೈಗೊಂಡಿರುವುದು ನಮ್ಮ ಸರ್ಕಾರವು ಸಮಾಜದ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಸ್ವಾಮೀಜಿ ಹೋರಾಟಕ್ಕೆ ಇಡೀ ನಾಯಕ ಸಮಾಜವೇ ಬೆನ್ನಿಗೆ ನಿಂತಿತ್ತು. ಸಚಿವ ಬಿ.ಶ್ರೀರಾಮುಲು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ’ ಎಂದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖಂಡರು, ಸ್ವಾಮೀಜಿ ಪರವಾಗಿ ಜೈಕಾರ ಹಾಕಿದರು.

ಮುಖಂಡರಾದ ಸುಂದರರಾಜ್, ನಾಗೇಶ್, ಲಕ್ಷ್ಮಣ್, ಕೃಷ್ಣನಾಯಕ, ವಿಜಯಕುಮಾರ ನಾಯಕ ‍ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.