
ಮೈಸೂರು: ‘ಮುದ್ದುರಾಮನ ಚೌಪದಿಗಳು ಮಾನವೀಯ ಮೌಲ್ಯಗಳನ್ನು ನೆನಪಿಸುವ ಜೊತೆಗೆ ವ್ಯಕ್ತಿಯ ಅಂತರಂಗ ಶುದ್ಧಿಗೆ ದಾರಿ ತೋರಿಸುವ ಕಾವ್ಯವಾಗಿವೆ’ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜು ಸೋಮವಾರ ಆಯೋಜಿಸಿದ್ದ ‘ಮುದ್ದುರಾಮ- ಒಂದು ಪರಿಮಳದ ಪಯಣ’ ಉಪನ್ಯಾಸ ಮಾಲಿಕೆ-2 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ‘ಇಂದಿನ ಸಮಾಜ ಭೌತಿಕ ಪ್ರಗತಿಯ ಹಿಂದೆ ಓಡುತ್ತಿರುವ ಸಂದರ್ಭದಲ್ಲಿ, ಮೌಲ್ಯಾಧಾರಿತ ಬದುಕಿನ ದಿಕ್ಕು ತೋರಿಸುವ ಬೆಳಕಿನ ಹಾದಿಯಲ್ಲಿ ನಡೆಯಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.
‘ಮುದ್ದುರಾಮನ ಚೌಪದಿಗಳು ಹಾಗೂ ಅದರ ಕರ್ತೃ ಕೆ.ಸಿ.ಶಿವಪ್ಪ ಅವರ ಸಾಹಿತ್ಯ ನಮ್ಮನ್ನು ಆಕರ್ಷಿಸಿದೆ. ಸಮಾಜವನ್ನು ನೈತಿಕವಾಗಿ, ಮಾನವೀಯವಾಗಿ ಬೆಳೆಸುವ ಮಹತ್ತರ ಜವಾಬ್ದಾರಿ ಸಾಹಿತ್ಯ ಹಾಗೂ ಸಾಹಿತಿಗಳ ಮೇಲಿದೆ. ಇಂತಹ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಕೆ.ಸಿ.ಶಿವಪ್ಪ ತಮ್ಮ ಮುದ್ದುರಾಮನ ಚೌಪದಿಗಳ ಮೂಲಕ ನಿರ್ವಹಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.
ವಾಗ್ಮಿ ಎಂ.ಕೃಷ್ಣೇಗೌಡ ‘ ಮುದ್ದು ರಾಮನ ಚೌಪದಿಗಳು ಅಂತರಂಗ ಬೆಳಗುವ ಸಂವಿಧಾನದಂತಿವೆ. ನವ ಸಮಾಜದ ನಿರ್ಮಾಣಕ್ಕೆ ಬುದ್ಧ, ಗಾಂಧಿ, ವಿವೇಕಾನಂದ, ಬಸವಣ್ಣ, ಕುವೆಂಪು ಮೊದಲಾದ ಮಹನೀಯರು ಬಿಟ್ಟು ಹೋದ ಮೌಲ್ಯ ಮಾರ್ಗ ಅರಿಯಬೇಕಾದರೆ ಮುದ್ದುರಾಮನ ಕಾವ್ಯದೊಳಗೆ ಅನುಸಂಧಾನ ನಡೆಸಬೇಕಿದೆ’ ಎಂದರು.
ಆದಿಚುಂಚನಗಿರಿ ಮೈಸೂರು ಶಾಖಾಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಕೆ.ಸಿ. ಶಿವಪ್ಪ, ವಿದುಷಿ ಶುಭಾ ರಾಘವೇಂದ್ರ, ಆರ್. ತನುಶ್ರೀ, ಬಿಜಿಎಸ್ ಬಿಇಡಿ ಕಾಲೇಜಿನ ಆಡಳಿತಾಧಿಕಾರಿ ಎಚ್. ಯಶೋಧಾ, ಪ್ರಾಂಶುಪಾಲ ನಾಗರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.