ಮೈಸೂರು: ‘ಕಲೆ–ಸಂಗೀತದಿಂದ ಸಂಸ್ಕಾರ ಸಿಗಲಿದೆ’ ಎಂದು ಸುತ್ತೂರಿನ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನೃತ್ಯಾಲಯ ಟ್ರಸ್ಟ್ ಪ್ರದರ್ಶಕ ಕಲೆಗಳ ಅಕಾಡೆಮಿ ಶುಕ್ರವಾರ ರಾತ್ರಿ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ‘40ರ ನಲಿವು–ನಿತ್ಯ ನರ್ತನ ಪರ್ವ’ಕ್ಕೆ ಚಾಲನೆ ನೀಡಿದ ಸ್ವಾಮೀಜಿ ಆಶೀರ್ವಚನ ನೀಡಿದರು.
‘ಸಂಸ್ಕಾರ ಕಲಿತ ವಿದ್ಯಾರ್ಥಿ, ತನ್ನ ಕುಟುಂಬದ ಸಂಸ್ಕಾರವನ್ನು ಉತ್ತಮಗೊಳಿಸುತ್ತಾನೆ. ಇದರ ಜತೆಗೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿಯೂ ರೂಪುಗೊಳ್ಳುತ್ತಾನೆ. ಇದಕ್ಕೆ ಕಲಾವಿದೆ ತುಳಸಿ ರಾಮಚಂದ್ರ ಕುಟುಂಬವೇ ನೈಜ ಸಾಕ್ಷಿಯಾಗಿದೆ’ ಎಂದರು.
‘ಕಲೆ–ಸಂಗೀತದ ವಾತಾವರಣದಲ್ಲಿ ಬೆಳೆಯುವ ಮಕ್ಕಳು ತಾವಿದ್ದೆಡೆ ಸಂಸ್ಕಾರದ ಬಳ್ಳಿಯನ್ನು ಹಬ್ಬಿಸುತ್ತಾರೆ. ಇದಕ್ಕೆ ನೃತ್ಯಾಲಯ ಟ್ರಸ್ಟ್ ಸಾಕ್ಷಿಯಾಗಿದೆ. ತಮ್ಮ ಮನೆಯ ಸಂಸ್ಕಾರವನ್ನು ತುಳಸಿ ರಾಮಚಂದ್ರ ನೃತ್ಯಾಲಯದ ವಿದ್ಯಾರ್ಥಿಗಳಿಗೂ ಪಸರಿಸಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎಚ್.ವಿ.ರಾಜೀವ್ ಮಾತನಾಡಿ, ‘ಮಹಾರಾಜರ ಕಾಲದಿಂದಲೂ ಮೈಸೂರು ಕಲೆ, ಸಾಹಿತ್ಯ, ಸಂಗೀತ, ನೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ವಿಶಿಷ್ಟ ಸ್ಥಾನಮಾನವನ್ನು ಗಳಿಸಿಕೊಂಡಿದೆ. ಈ ಪರಂಪರೆಯನ್ನು ಇಂದಿಗೂ ಜೆಎಸ್ಎಸ್, ವಿಶ್ವವಿದ್ಯಾಲಯ, ನೃತ್ಯಾಲಯಗಳು ಚಾಚೂ ತಪ್ಪದೇ ಅನೂಚಾನಾಗಿ ಮುಂದುವರೆಸಿಕೊಂಡು ಬರುತ್ತಿವೆ’ ಎಂದು ಹೇಳಿದರು.
ಡಾ.ತುಳಸಿ ರಾಮಚಂದ್ರ ಮಾರ್ಗದರ್ಶನದಲ್ಲಿ ನೃತ್ಯಾಲಯದ ವಿದ್ಯಾರ್ಥಿ ಸಮೂಹ ತಮ್ಮ ಪ್ರತಿಭೆ ಪ್ರದರ್ಶಿಸಿತು. ಕಲಾ ಪೋಷಕ ಕೆ.ವಿ.ಮೂರ್ತಿ ಉಪಸ್ಥಿತರಿದ್ದರು. ಕಲಾಸಕ್ತರು ನೃತ್ಯದ ಸೊಬಗನ್ನು ಕಣ್ತುಂಬಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.