ಮೈಸೂರು: ಎನ್ಟಿಎಂ ಮಾದರಿ ಹೆಣ್ಣು ಮಕ್ಕಳ ಶಾಲೆ ಉಳಿವಿಗಾಗಿ ಬೃಹತ್ ರ್ಯಾಲಿ ನಡೆಸಲಾಗುವುದು ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಎನ್ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಭಾಗಿಯಾದ ಪ್ರಗತಿಪರ ಮಠಾಧೀಶರು ಹಾಗೂ ಪ್ರಗತಿಪರ ಚಿಂತಕರ ಒಕ್ಕೂಟದ ವತಿಯಿಂದ ಪಾಲ್ಗೊಂಡ ಅವರು ರಾಮಕೃಷ್ಣಾಶ್ರಮದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಯೋಗ್ಯತೆ ಇದ್ದರೆ ಹೆಣ್ಣು ಮಕ್ಕಳಿಗಾಗಿ ಇಂತಹ ಒಂದು ಶಾಲೆ ತೆರೆಯಬೇಕು. ಆದರೆ, ಈ ಶಾಲೆಯನ್ನು ಉರುಳಿಸಿ ಅದರ ಮೇಲೆ ಸ್ಮಾರಕ ಕಟ್ಟುವುದು ಅವಿವೇಕ ಎಂದು ಹರಿಹಾಯ್ದರು.
ನಿರಂಜನ ಆಶ್ರಮದಲ್ಲಿ ಸಮಾಧಿ ಉರುಳಿಸಿ, ಸ್ಮಾರಕ ನಿರ್ಮಿಸಲಾಗುತ್ತಿದೆ. 45 ದಿನಗಳ ಪ್ರತಿಭಟನೆ ನೋಡಿಯಾದರೂ ಈ ಸ್ಮಾರಕದ ಗೊಡವೆ ಬೇಡ ಎಂದು ಹೋಗಬೇಕಿತ್ತು. ಇಲ್ಲವೇ ಇಂತಹ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಬೇಕಿತ್ತು. ಆದರೆ, ಶಾಲೆ ಮುಗಿಸುವ ಈ ಹಟ ಸರಿಯಲ್ಲ ಎಂದು ಟೀಕಿಸಿದರು.
ಕೇವಲ ಶಾಲೆ ಮಾತ್ರವಲ್ಲ ಪಕ್ಕದಲ್ಲಿರುವ ನಿರಂಜನ ಮಠವನ್ನೂ ಉಳಿಸಬೇಕಿದೆ. ಈ ಜಾಗವನ್ನು ಕಬಳಿಸುವ ಹುನ್ನಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.
ಶ್ರೀಕರ ಸವಿತನಂದಾ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಹೋರಾಟಗಾರರಾದ ಪುರುಷೋತ್ತಮ, ಮರಿದೇವಯ್ಯ, ಹರಿಹರ ಆನಂದಸ್ವಾಮಿ, ನಂಜರಾಜ ಅರಸ್, ಉಗ್ರನರಸಿಂಹೇಗೌಡ, ಮೋಹನ್ ಕುಮಾರ್ ಗೌಡ, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಕೊ.ಸೊ.ನರಸಿಂಹಮೂರ್ತಿ, ಅರವಿಂದ್ ಶರ್ಮಾ ಪ್ರತಿಭಟನೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.