ಮೈಸೂರು: ಇಲ್ಲಿನ ಮಹಾರಾಣಿ (ಎನ್ಟಿಎಂ) ಸರ್ಕಾರಿ ಕನ್ನಡ ಶಾಲೆಯನ್ನು ಉಳಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿಯೂ ನಡೆಸಲು ಮಹಾರಾಣಿ (ಎನ್ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ನಿರ್ಧರಿಸಿದೆ.
ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಧರಣಿ ನಡೆಯಲಿದ್ದು, ಇದರಲ್ಲಿ ವಿವಿಧ ಕನ್ನಡಪರ, ದಲಿತಪರ, ರೈತಪರ, ಕಾರ್ಮಿಕ ಪರ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ, ಬಿ.ಟಿ.ಲಲಿತಾ ನಾಯಕ, ವಸುಂಧರಾ ಭೂಪತಿ, ರಾ.ನಂ.ಚಂದ್ರಶೇಖರ ಸೇರಿದಂತೆ ಇನ್ನು ಹಲವು ಮಂದಿ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ತಿಳಿಸಿದ್ದಾರೆ.
ವಿವೇಕಾನಂದರು ಮೈಸೂರಿಗೆ ಬಂದಿದ್ದಾಗ ಶಾಲೆಯ ಪಕ್ಕದಲ್ಲಿರುವ ನಿರಂಜನ ಮಠದಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಶಾಲೆಯನ್ನು ಕೆಡವಿ, ಅದರ ಜಾಗವನ್ನೂ ಸೇರಿಸಿಕೊಂಡು ವಿವೇಕ ಸ್ಮಾರಕವನ್ನು ನಿರ್ಮಿಸಲು ರಾಮಕೃಷ್ಣ ಮಠಕ್ಕೆ ಸರ್ಕಾರ ಜಾಗ ನೀಡಿದೆ. ಇದನ್ನು ವಿರೋಧಿಸಿ ಮೈಸೂರಿನಲ್ಲಿ ಕಳೆದ 23 ದಿನಗಳಿಂದ ಇಲ್ಲಿನ ಶಾಲೆಯ ಮುಂಭಾಗ ಧರಣಿ ನಡೆಯುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮೌನ ಪ್ರತಿಭಟನೆ ಮುಂದುವರಿಕೆ
ಶಾಲೆ ಉಳಿಸಬೇಕು ಎಂದು ಆಗ್ರಹಿಸಿ ಎನ್ಟಿಎಂ ಶಾಲೆ ಮುಂಭಾಗ ನಡೆಯುತ್ತಿರುವ ಮೌನ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ.
ಎನ್ಟಿಎಂ ಶಾಲೆ ಉಳಿಯಲಿ, ಸ್ಮಾರಕವೂ ಆಗಲಿ ಎಂಬ ಭಿತ್ತಿಪತ್ರ ಪ್ರದರ್ಶಿಸಲಾಯಿತು. ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ಕೊ.ಸು.ನರಸಿಂಹಮೂರ್ತಿ, ಮೋಹನ್ ಕುಮಾರ್ಗೌಡ, ಅರವಿಂದ್ ಶರ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.