ಮೈಸೂರು: ‘ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮಿಂದಾಗುವ ಏನಾದರೂ ಕೊಡುಗೆ, ಸೇವೆ ಸಲ್ಲಿಸಬೇಕು’ ಎಂದು ಮಣಿಪುರದ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಯ್ಯಪ್ಪನ್ ಹೇಳಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘ ಶನಿವಾರ ಆಯೋಜಿಸಿದ್ದ ‘ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ-2019 ಮತ್ತು ಅಗ್ರಮಾನ್ಯ ಹಿರಿಯ ವಿದ್ಯಾರ್ಥಿಗಳ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾವು ಎಲ್ಲಿಯೇ ಹುಟ್ಟಲಿ. ಬದುಕಿರುವಾಗಲೇ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಆ ಮೂಲಕ ನಮ್ಮ ಪೀಳಿಗೆಗೆ ಆದರ್ಶಯುತ ಬದುಕನ್ನು ನೀಡಬೇಕು’ ಎಂದರು.
‘ಮೈಸೂರು ವಿ.ವಿ.ಗೂ ನನಗೂ ಅವಿನಾಭಾವ ಸಂಬಂಧವಿದೆ. ನನ್ನ ತಾತ ಈ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಪ್ರೊಫೆಸರ್ ಆಗಿದ್ದರು. ನಾನೂ ಕೂಡ ನಂಜನಗೂಡಿನಲ್ಲಿ ಹುಟ್ಟಿದವನು. ಎರಡನೇ ತರಗತಿಯವರೆಗೂ ಅಲ್ಲಿಯೇ ಓದಿದೆ. ಹಾಗಾಗಿ ಮೈಸೂರೆಂದರೆ ನನಗೆ ಅಚ್ಚುಮೆಚ್ಚು’ ಎಂದು ತಿಳಿಸಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ ‘ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ನಾನು ಒಂದು ಭಾಗವಾಗಿದ್ದಕ್ಕೆ ಸಂತಸವಾಗುತ್ತಿದೆ. ಎಷ್ಟೋ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತಾಯಿತು. ರಾಜಮನೆತನ ಬಹಳ ಹಿಂದಿನಿಂದಲೂ ಶಿಕ್ಷಣಕ್ಕೆ ಒತ್ತು ನೀಡಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ’ ಎಂದರು.
ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ, ಉಪಾಧ್ಯಕ್ಷ ಎನ್.ನಿರಂಜನ್ ನಿಕ್ಕಂ, ಪ್ರೊ.ಎಚ್.ಎಂ.ವಸಂತಮ್ಮ, ಕಾರ್ಯದರ್ಶಿ ಪ್ರೊ.ಎಸ್.ಉಮೇಶ್, ಜಂಟಿ ಕಾರ್ಯದರ್ಶಿ ಡಾ.ಎಂ.ಎಸ್.ಸಪ್ನಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.