ಮೈಸೂರು: ತಮಿಳುನಾಡಿನ ಮೇಲ್ ಮರವತ್ತೂರಿನ ಆದಿಪರಾಶಕ್ತಿ ದೇವಾಲಯಕ್ಕೆ ತೆರಳಿದ್ದ ತಾಲ್ಲೂಕಿನ 19 ಮಂದಿ, ಬನ್ನೂರಿನ ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್ನ 10 ವಿದ್ಯಾರ್ಥಿಗಳಿಗೆ ಹಾಗೂ ಮತ್ತೊಬ್ಬ ಗ್ರಾಮಸ್ಥರಿಗೆ ಕೋವಿಡ್ ಧೃಢಪಟ್ಟಿದೆ.
ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಓಂಶಕ್ತಿ ಯಾತ್ರೆಗೆ ಹೋಗಿದ್ದವರಲ್ಲಿ ಸೋಂಕು ಪತ್ತೆಯಾದ ಕಾರಣ 150 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅವರಲ್ಲಿ 19 ಮಂದಿಗೆ ಸೋಂಕು ಪತ್ತೆಯಾಗಿದೆ.
22 ವಿದ್ಯಾರ್ಥಿನಿಯರಿಗೆ ಕೋವಿಡ್ ದೃಢ (ಕೊರಟಗೆರೆ ವರದಿ): ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 22 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತ
ರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂಜಾಗ್ರತೆಯಾಗಿ ಜ. 13ರವರೆಗೆ ಶಾಲೆಗೆ ರಜೆ ನೀಡಲಾಗಿದೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
52 ಮಂದಿಗೆ ಕೋವಿಡ್ (ಕೊಲ್ಹಾರ, ವಿಜಯಪುರ ವರದಿ): ‘ತಾಲ್ಲೂಕಿನ ಕೂಡಗಿ ಎನ್ಟಿಪಿಸಿ ವ್ಯಾಪ್ತಿಯಲ್ಲಿ ಒಂದು ವಾರದಲ್ಲಿ 56 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಇವರನ್ನು ಹೋಂ ಐಸೊಲೇಷನ್ ಮಾಡಿದ್ದು, ನಾಲ್ವರು ಗುಣಮುಖರಾಗಿದ್ದಾರೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
‘ದೆಹಲಿ, ಗೋವಾ ಸೇರಿ ವಿವಿಧೆಡೆ ತೆರಳಿದ್ದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸಿಬ್ಬಂದಿ ಹಾಗೂ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 20 ಜನರಿಗೂ ಕೋವಿಡ್ ತಗುಲಿದೆ. ಈವರೆಗೆ 1,036 ಮಂದಿಯನ್ನು ಪರೀಕ್ಷಿಸಲಾಗಿದೆ’ ಎಂದು ತಹಶೀಲ್ದಾರ್ ಎಸ್.ಡಿ.ಮುರಾಳ ತಿಳಿಸಿದ್ದಾರೆ.
ಶಿವಮೊಗ್ಗ ವರದಿ: ತಮಿಳುನಾಡಿನಲ್ಲಿ ಓಂಶಕ್ತಿ ದರ್ಶನ ಪಡೆದು ಶಿವಮೊಗ್ಗಕ್ಕೆ ಮರಳಿರುವ ಆರು ಮಂದಿ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆಂಪಯ್ಯನತೊಕ್ಕಲಿನ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.