ಮೈಸೂರು: ಕೇಂದ್ರ ಸರ್ಕಾರ ಈಚೆಗಷ್ಟೇ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಡಿ.8ರ ಮಂಗಳವಾರ ಕರೆ ನೀಡಿರುವ ‘ಭಾರತ್ ಬಂದ್’ಗೆ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಕಾರ್ಮಿಕ ದಲಿತ ಐಕ್ಯ ಹೋರಾಟ ಸಮಿತಿ, ಪ್ರಗತಿಪರರ ಒಕ್ಕೂಟ, ಕನ್ನಡ ಪರ ಸಂಘಟನೆಗಳು, ಕಬ್ಬು ಬೆಳೆಗಾರರ ಸಂಘ, ಎಪಿಎಂಸಿ ಮಂಡಿ ಮಾಲೀಕರ ಸಂಘ, ರೈತ ಸಂಘಟನೆಗಳು, ಸಿಪಿಐ, ಸಿಪಿಐಎಂ, ಎಐಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು, ಜಿಲ್ಲಾ ಕಾಂಗ್ರೆಸ್ ಘಟಕವೂ ಸಹ ಭಾರತ್ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಹಿಂದೂ ಪರ ಸಂಘಟನೆಗಳು, ಎಬಿವಿಪಿ, ಬಿಜೆಪಿ ಬಂದ್ಗೆ ಬೆಂಬಲ ಸೂಚಿಸಿಲ್ಲ.
‘ದೇಶದ ಎಲ್ಲೆಡೆ ಅನ್ನದಾತರು ಉಳಿವಿಗಾಗಿ ಹೋರಾಟ ಆರಂಭಿಸಿದ್ದಾರೆ. ಈ ಹೋರಾಟಕ್ಕೆ ಮೈಸೂರು-ಚಾಮರಾಜನಗರ ಒಕ್ಕಲಿಗ ಸಂಘವು ಬೆಂಬಲ ನೀಡಲಿದೆ’ ಎಂದು ಸಂಘದ ಅಧ್ಯಕ್ಷ ಜಿ.ಮಂಜು ತಿಳಿಸಿದ್ದಾರೆ.
ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ, ಆಟೊ ಚಾಲಕರ ಸಂಘ, ಮಾರುಕಟ್ಟೆ ವ್ಯಾಪಾರಿಗಳ ಸಂಘ ನೈತಿಕ ಬೆಂಬಲ ಸೂಚಿಸಿವೆ. ಬಂದ್ಗೆ ನಮ್ಮ ನೈತಿಕ ಬೆಂಬಲವಿದೆ. ಆದರೆ ವ್ಯಾಪಾರ–ವಹಿವಾಟನ್ನು ಎಂದಿನಂತೆ ನಡೆಸಲಿದ್ದೇವೆ ಎಂದು ತಿಳಿಸಿವೆ. ಇದರಿಂದ ಮೈಸೂರಿನ ಬಹುತೇಕ ಮಾರುಕಟ್ಟೆಗಳು ಎಂದಿನಂತೆ ತೆರೆಯುವ ನಿರೀಕ್ಷೆಯಿದೆ.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಸಿದ ಸಂಘದ ಪದಾಧಿಕಾರಿಗಳು, ಹೋಟೆಲ್ ಉದ್ಯಮ ಈಗಾಗಲೇ ನೆಲಕಚ್ಚಿದೆ. ಬಂದ್ ಮಾಡುವುದು ಸೂಕ್ತವಲ್ಲ. ನೈತಿಕ ಬೆಂಬಲ ಘೋಷಿಸೋಣ ಎಂಬ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ಹೋಟೆಲ್ಗಳು ಎಂದಿನಂತೆ ಮಂಗಳವಾರವೂ ಕಾರ್ಯಾಚರಿಸಲಿವೆ.
ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಸಹ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ. ಕೋವಿಡ್–19, ಕರ್ನಾಟಕ ಬಂದ್ನಿಂದ ಟ್ರಾವೆಲ್ಸ್ ಉದ್ಯಮ ಈಗಾಗಲೇ ನೆಲ ಕಚ್ಚಿದೆ. ಭಾರತ್ ಬಂದ್ನಲ್ಲಿ ಭಾಗಿಯಾದರೆ ಮತ್ತಷ್ಟು ಹೊಡೆತ ಬೀಳಲಿದೆ. ಆದ್ದರಿಂದ ನೈತಿಕ ಬೆಂಬಲವನ್ನಷ್ಟೇ ನೀಡಲಿದ್ದೇವೆ ಎಂದು ಅಸೋಸಿಯೇಷನ್ ತಿಳಿಸಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.