ಹಂಪಾಪುರ: ನಾಗರಹೊಳೆ ಅಭಯಾರಣ್ಯದ ಮಾಸ್ತಿಗುಡಿ ಸಮೀಪ ಮೈಸೂರು–ಮಾನಂದವಾಡಿ ರಸ್ತೆ ಬದಿಯ ಅರಣ್ಯದಲ್ಲಿ ಬೇಟೆಗಾಗಿ ಮರದ ಮರೆಯಲ್ಲಿ ಹೊಂಚುಹಾಕಿದ್ದ ಹುಲಿಎದುರು ಬಂದ ಎತ್ತಿಗೆ ಹೆದರಿ ಓಡಿ ಹೋದ ಪ್ರಸಂಗ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ಡಿ.ಬಿ. ಕುಪ್ಪೆ ವಲಯದ ಬಾವಲಿಯಿಂದ ಎಚ್.ಡಿ. ಕೋಟೆಗೆ ಬರುತ್ತಿದ್ದ ಪ್ರಯಾಣಿಕರು ಈ ದೃಶ್ಯ ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಮರದ ಮರೆಯಲ್ಲಿದ್ದ ಹುಲಿಯು ಎತ್ತನ್ನು ನೋಡಿದೆ, ಎತ್ತು ಹುಲಿಯನ್ನು ನೋಡದೇ ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಅದಕ್ಕೆ ಹುಲಿ ಕಂಡಿದೆ. ಆಗ ಹುಲಿಯತ್ತ ಗುದ್ದುವಂತೆ ಹೋದ ಎತ್ತು ಹುಲಿಯನ್ನು ಭಯಭೀತಿಗೊಳಿಸಿದೆ. ತಕ್ಷಣ ಎತ್ತಿಗೆ ಹೆದರಿದ ಹುಲಿ ಕಾಡಿನತ್ತ ಓಡಿದೆ. ಎತ್ತು ಅಲ್ಲಿ ನಿಲ್ಲದೆ ರಸ್ತೆಯಲ್ಲೇ ಓಡಿ ಸ್ವತಃ ರಕ್ಷಿಸಿಕೊಂಡಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಇದೇನು ಹುಲಿಯೋ, ಇಲಿಯೋ? ಎತ್ತಿಗೆ ಹೆದರಿ ಓಡುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಕಾಡಿನಲ್ಲಿ ಜಾನುವಾರುಗಳನ್ನು ಬಿಡುವುದು ನಿಷೇಧ, ಆದರೆ ಹುಲಿಯನ್ನು ಎದರಿಸಿದ ಎತ್ತು ಮಾಸ್ತಿ ಗುಡಿಗೆ ಭಕ್ತರು ನೀಡಿರುವುದು. ದೇವಾಲಯದ ಅಕ್ಕಪಕ್ಕದಲ್ಲಿ ಇರುತ್ತದೆ ಎಂದು ಹೆಸರನ್ನು ಹೇಳದ ಅರಣ್ಯ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಣಿಪ್ರಿಯರ ಹುಬ್ಬೇರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.