ADVERTISEMENT

ಮೈಸೂರು: ಅಪರೂಪದ ಜಲವರ್ಣ ಕಲಾಕೃತಿಗಳ ಪ್ರದರ್ಶನ

ಕೆ.ಎಸ್.ಗಿರೀಶ್
Published 6 ಡಿಸೆಂಬರ್ 2019, 19:45 IST
Last Updated 6 ಡಿಸೆಂಬರ್ 2019, 19:45 IST
ಎ.ಆರ್.ಮಂಜುನಾಥ್ ಅವರ ಕುಂಚದಲ್ಲಿ ಮೂಡಿಬಂದ ಮಹಿಳೆ ಚಿತ್ರ
ಎ.ಆರ್.ಮಂಜುನಾಥ್ ಅವರ ಕುಂಚದಲ್ಲಿ ಮೂಡಿಬಂದ ಮಹಿಳೆ ಚಿತ್ರ   

ಜಲವರ್ಣ ಕಲಾಕೃತಿಗಳು ಅಪರೂಪ ಏನಲ್ಲ. ಇಂದು ಬಹಳಷ್ಟು ಕಲಾವಿದರು ಜಲವರ್ಣ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ, ಪ್ಯಾಕಿಂಗ್ ಶೀಟ್ ಮೇಲೆ ಬರೆದಿರುವುದು ಅಪರೂಪ. ಇಂತಹ ಕಲಾಕೃತಿಗಳ ಪ್ರದರ್ಶನ ಶುಕ್ರವಾರದಿಂದ ಇಲ್ಲಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆರಂಭವಾಗಿದ್ದು, ಡಿ.8ರವರೆಗೂ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ವೀಕ್ಷಣೆಗೆ ಲಭ್ಯವಿದೆ.

ಈ ಜಲವರ್ಣ ಕಲಾಕೃತಿಗಳು ಕಲಾವಿದ ಎ.ಆರ್.ಮಂಜುನಾಥ್ ಅವರ ಕುಂಚದಿಂದ ಮೂಡಿ ಬಂದಿವೆ. ಮೂಲತಃ ಶಿಲ್ಪಕಲೆಯ ಕಲಾವಿದರಾದ ಅವರು, ಆ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಈಗ ತಮ್ಮ ಪ್ರಥಮ ಏಕವ್ಯಕ್ತಿ ಜಲವರ್ಣ ಕಲಾಕೃತಿಗಳ ಪ್ರದರ್ಶನವನ್ನು ಇಲ್ಲಿ ಹಮ್ಮಿಕೊಂಡಿದ್ದಾರೆ.

ಇದರಲ್ಲಿ ಬಿ.ವಿ.ಕಾರಂತರ ಚಿತ್ರವನ್ನು ತೈಲವರ್ಣದಲ್ಲಿ ಬಿಡಿಸಿರುವುದು ಸೂಜಿ ಗಲ್ಲಿನಂತೆ ಸೆಳೆಯುತ್ತಿದೆ.

ADVERTISEMENT

ಹಂಪಿಯ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರ ಛಾಯಾ ಚಿತ್ರಗಳನ್ನೂ ಇವರು ಜಲವರ್ಣದಲ್ಲಿ ಬಿಡಿಸಿರುವುದು ವಿಶೇಷ.

ದೀಪ ಹಿಡಿದು ಬರುತ್ತಿರುವ ಸ್ತ್ರೀಯ ಚಿತ್ರ, ಮಕ್ಕಳ ಹೋಳಿಯಾಟದ ಸಂಭ್ರಮ, ಮುಗ್ಧ ಮನಸ್ಸಿನ ಭಾವಗಳನ್ನು ಹೊರ ಹೊಮ್ಮಿಸುವಲ್ಲಿ ಇವರು ಸಫಲರಾಗಿದ್ದಾರೆ‌. ಒಟ್ಟು13 ಬಗೆಯ ಕಲಾಕೃತಿಗಳ ಪ್ರದರ್ಶ‌ನ ಇಲ್ಲಿದೆ.

ಮೈಸೂರಿನಲ್ಲೇ ವಾಸವಾಗಿರುವ ಎ.ಆರ್.ಮಂಜುನಾಥ್ ಅವರಿಗೆ 2009–10ನೇ ಸಾಲಿನಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, 2012ರಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ (ಕಾವಾ) ಆಯೋಜಿಸಿದ್ದ ದಸರಾ ಮೇಳ ಪ್ರಶಸ್ತಿ, 2013 ಮತ್ತು 2016ರಲ್ಲಿ ದಸರಾ ವಸ್ತುಪ್ರದರ್ಶನ ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.