
ಮೈಸೂರು: ‘ಅಪರೂಪ ವ್ಯಕ್ತಿತ್ವದ ಸಾಹಿತಿ ಪಂಜೆ ಮಂಗೇಶರಾಯರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿ ಇತರರಿಗೆ ಮಾರ್ಗದರ್ಶಕರಾದರು’ ಎಂದು ಲೇಖಕ ಶ್ರೀಪಾದ ಹೆಗಡೆ ಹೇಳಿದರು.
ಇಲ್ಲಿನ ವೀ–ಕೆರ್ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ನಡೆದ ಮಾಸಿಕ ಪುಸ್ತಕ ಓದು ಕಾರ್ಯಕ್ರಮ ಹಾಗೂ ಪಂಜೆ ಮಂಗೇಶರಾಯರ ಜನ್ಮದಿನೋತ್ಸವದಲ್ಲಿ ಮಾತನಾಡಿದರು.
‘ಸಣ್ಣ ಕಥೆಗಳ ಜನಕರಾದ ಅವರು ತುಂಬಾ ಸಹಜ ಲಯದ ಶಿಶು ಸಾಹಿತ್ಯ ರಚಿಸಿದರು. ಶೈಕ್ಷಣಿಕ ರಂಗದಲ್ಲಿ ತಮ್ಮ ಅಧ್ಯಾಪನದಿಂದ ಗೋವಿಂದ ಪೈ ಅವರಂತಹ ತರುಣರನ್ನು ಪ್ರೇರೇಪಿಸಿದ್ದು, ಕನ್ನಡಕ್ಕೆ ಮೊದಲ ರಾಷ್ಟ್ರಕವಿ ದೊರೆಯುವಂತಾಯಿತು’ ಎಂದು ಸ್ಮರಿಸಿದ ಅವರು, ಪಂಜೆ ಅವರ ‘ಮೂಡುವನು ರವಿ ಮೂಡುವನು’ ಕವನವನ್ನು ವಾಚಿಸಿದರು.
ಲೇಖಕ ಕೆ.ಪಿ.ವಾಸುದೇವನ್ ಮಾತನಾಡಿ, ‘ಓದು ನಿರಂತರ ಹರಿಯುವಿಕೆ. ಪ್ರತಿ ಬಾರಿಯೂ ಅದು ಮುಂದಿನ ಮೆಟ್ಟಿಲಿಗೆ ಕೊಂಡೊಯ್ಯುವಂತಿರಬೇಕು’ ಎಂದರು.
ಸಂಸ್ಥೆಯ ಸಂಸ್ಥಾಪಕಿ ಕುಮುದಿನಿ ಅಚ್ಚಿ, ಪತ್ರಕರ್ತ ಅಯ್ಯಪ್ಪ ಹೂಗಾರ್, ಸಾಹಿತ್ಯಾಸಕ್ತರಾದ ರಮ್ಯಾ, ಎಂಜಿನಿಯರ್ ಅಶ್ವತ್ಥ್, ರಂಗಕರ್ಮಿ ಚಂದ್ರು, ಮೂಡಿಗೆರೆ ಗೋಪಾಲ, ಒಡನಾಡಿ ಸ್ಟ್ಯಾನ್ಲಿ, ಶಶಾಂಕ್, ಸಂಸ್ಥೆಯ ಕಾರ್ಯಕರ್ತೆ ಚಂದನಾ, ಅನುಶ್ರೀ, ಒಡನಾಡಿ ಸಂಸ್ಥೆ ಮತ್ತು ಸರ್ಕಾರಿ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.