ADVERTISEMENT

ಮೈಸೂರು: ಕಾಗದರಹಿತ ಆಡಳಿತಕ್ಕೆ ಹಿನ್ನಡೆ!

ತ್ರಿಪ್ರತಿಯಲ್ಲಿ ಮಾಹಿತಿ ಸಲ್ಲಿಕೆಗೆ ಕಾಲೇಜು ಶಿಕ್ಷಣ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:39 IST
Last Updated 9 ಡಿಸೆಂಬರ್ 2025, 6:39 IST
   

ಮೈಸೂರು: ಕಾಗದರಹಿತ ಅಡಳಿತಕ್ಕೆ ಒತ್ತು ನೀಡಲಾಗುತ್ತಿದೆ ಹಾಗೂ ಅದಕ್ಕಾಗಿ ವಿದ್ಯುನ್ಮಾನ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಕಾಲೇಜು ಶಿಕ್ಷಣ ಇಲಾಖೆಯು ತನ್ನ ಸಿಬ್ಬಂದಿಯ ಕಾರ್ಯನಿರ್ವಹಣಾ ವರದಿಯನ್ನು ಭೌತಿಕವಾಗಿ ಮೂರು ಪ್ರತಿಯಲ್ಲಿ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಿರುವುದು ಈ ಆಶಯಕ್ಕೆ ಹಿನ್ನಡೆಯಾಗುವಂತೆ ಮಾಡಿದೆ.

ಹಿಂದಿನ ವರ್ಷಗಳಲ್ಲಿ ಎಲ್ಲವನ್ನೂ ಆನ್‌ಲೈನ್‌ನಲ್ಲಿ (ನಿಗದಿತ ತಂತ್ರಾಂಶದಲ್ಲಿ) ನಡೆಸಲಾಗುತ್ತಿತ್ತು. ಈ ಬಾರಿ ಬದಲಾವಣೆ ಮಾಡಿರುವುದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುಬ್ಬೇರಿಸಿದೆ. ಅದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ಮಾಹಿತಿ ಸೋರಿಕೆಯಾಗುವ ಆತಂಕವೂ ಕಾಡುತ್ತಿದೆ.

ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವರದಿ ಸಲ್ಲಿಸಬೇಕಾಗಿದೆ.

ADVERTISEMENT

ಎಲ್ಲ ಗ್ರೂಪ್‌ ‘ಎ’, ‘ಬಿ’, ‘ಸಿ’ ಅಧಿಕಾರಿ ಹಾಗೂ ಸಿಬ್ಬಂದಿಯ 2024–25ನೇ ಸಾಲಿನ ಕಾರ್ಯನಿರ್ವಹಣಾ ವರದಿಯನ್ನು ಎಲ್ಲ ಹಂತಗಳಲ್ಲಿ ಪೂರ್ಣಗೊಂಡ ನಂತರ 9 ಪುಟಗಳ ‘ಇ–ಪಿಎಆರ್‌’ ವರದಿ ಹಾಗೂ ಭೌತಿಕವಾಗಿ ಆಸ್ತಿ ಮತ್ತು ಋಣಪಟ್ಟಿಯನ್ನು (ಗ್ರೂಪ್‌ ‘ಡಿ’ ನೌಕರರು ಸೇರಿದಂತೆ) ಭರ್ತಿ ಮಾಡಿ ದ್ವಿಪ್ರತಿಯಲ್ಲಿ ಪಡೆದು ಇ–ಪಿಎಆರ್‌ನೊಂದಿಗೆ ಲಗತ್ತಿಸಬೇಕು. ಬೋಧಕರು ಹಾಗೂ ಬೋಧಕೇತರರ ಪಟ್ಟಿಯನ್ನು ತ್ರಿಪ್ರತಿಯಲ್ಲಿ ಡಿ.15ರೊಳಗೆ ಸಲ್ಲಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರಾಂಶುಪಾಲರಿಗೆ ಆದೇಶಿಸಲಾಗಿದೆ.

ಹಿಮ್ಮುಖ ಚಲನೆಯಷ್ಟೆ: 

ಈ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರಾಂಶುಪಾಲರು ಹಾಗೂ ಬೋಧಕರು, ‘ಈಗಿನ ತಂತ್ರಜ್ಞಾನದ ಯುಗದಲ್ಲಿ ‘ಹಿಮ್ಮುಖ ಚಲನೆ’ಯ ಆದೇಶವಿದು’ ಎಂದು ದೂರಿದರು.

‘ಇ–ಆಡಳಿತಕ್ಕೆ ಒತ್ತು ಕೊಟ್ಟಿದ್ದರಿಂದ, ಕಳೆದ ಹಲವು ವರ್ಷಗಳಿಂದಲೂ ‘ಇ–ಪಿಎಆರ್‌’ ತಂತ್ರಾಂಶದಲ್ಲಿ ಕಾರ್ಯನಿರ್ವಹಣೆ ವರದಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸುತ್ತಿದ್ದೆವು. ಪ್ರತಿ ಸಿಬ್ಬಂದಿ, ಉಪನ್ಯಾಸಕರು ನಮೂನೆ ತುಂಬಿದ ನಂತರ ಪ್ರಾಂಶುಪಾಲರಿಗೆ ಲಭ್ಯವಾಗುತ್ತಿತ್ತು. ಅವರು ಅಧಿಕಾರಿಗಳಿಗೆ ರವಾನಿಸುತ್ತಿದ್ದರು. ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತಿತ್ತು. ಹಿಂದಿನ ವರ್ಷಗಳ ವರದಿಯನ್ನು ವೀಕ್ಷಿಸಲೂ ಅವಕಾಶವಿದೆ. ಈಗ ಮುದ್ರಿಸಿ ಕೊಡಬೇಕೆಂಬುದು ಹಳೆಯ ವ್ಯವಸ್ಥೆಗೆ ಹಿಂತಿರುಗುವಂತಾಗಿದೆ. ಇದು ಅವೈಜ್ಞಾನಿಕ ಹಾಗೂ ದುರುದ್ದೇಶಪೂರ್ವಕ’ ಎನ್ನುವುದು ಪ್ರಾಂಶುಪಾಲರ ಆರೋಪ.

‘ವೈಯಕ್ತಿಕ ವರದಿಯನ್ನು ಆನ್‌ಲೈನ್‌ನಲ್ಲಿ ಮಾಡುವುದರಿಂದ ಗೋಪ್ಯತೆ ಇರುತ್ತಿತ್ತು. ಈಗ ಮಾಹಿತಿಯು ಇತರರಿಗೆ ತಿಳಿಯುವಂತಾಗುತ್ತದೆ. ಮಾಹಿತಿಯನ್ನು ಗೋಪ್ಯವಾಗಿಡಬೇಕು ಎಂಬ ಆಶಯಕ್ಕೆ ಎಳ್ಳುನೀರು ಬಿಟ್ಟಂತಾಗಿದೆ. ಖಾಸಗಿತನದ ಉಲ್ಲಂಘನೆಯೂ ಆಗುತ್ತದೆ’ ಎನ್ನುವುದು ಅವರ ಅಸಮಾಧಾನ. 

‘ಮಾಹಿತಿ ಸೋರಿಕೆಯಾಗಿ ಅದರಿಂದ ಉಂಟಾಗುವ ತೊಂದರೆಗೆ ಯಾರು ಜವಾಬ್ದಾರಿ ಆಗುತ್ತಾರೆ’ ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.