ADVERTISEMENT

ಸರ್ಕಾರಿ ಕಚೇರಿಯಲ್ಲಿ ಪಾರ್ಟಿ ಆರೋಪ

ಕೆಟ್ಟ ಹೆಸರು ತರಲು ಹಿಂದಿನ ಅಧಿಕಾರಿಯ ಚಿತಾವಣೆ: ಓಂಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:07 IST
Last Updated 21 ಸೆಪ್ಟೆಂಬರ್ 2020, 1:07 IST
ಮೈಸೂರಿನ ಕ್ರೀಡಾ ಇಲಾಖೆ ಕಚೇರಿಯಲ್ಲಿ ಓಂಪ್ರಕಾಶ್‌ ಅವರ ಪತ್ನಿಯಿಂದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ
ಮೈಸೂರಿನ ಕ್ರೀಡಾ ಇಲಾಖೆ ಕಚೇರಿಯಲ್ಲಿ ಓಂಪ್ರಕಾಶ್‌ ಅವರ ಪತ್ನಿಯಿಂದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ   

ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೈಸೂರು ಜಿಲ್ಲೆ ಸಹಾಯಕ ನಿರ್ದೇಶಕರಾಗಿ ಬಂದಿರುವ ಜಿ.ಓಂಪ್ರಕಾಶ್‌ ಅವರು ಸರ್ಕಾರಿ ಕಚೇರಿಯಲ್ಲಿ ಕುಟುಂಬದವರ ಜೊತೆ ನಡೆಸಿದ್ದಾರೆ ಎನ್ನಲಾದ ಪಾರ್ಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸರ್ಕಾರ ಪೂರೈಸಿರುವ ಸಮವಸ್ತ್ರಗಳನ್ನು ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅವರ ಪತ್ನಿ ಕೈಯಲ್ಲಿ ಕ್ರೀಡಾಪಟುಗಳಿಗೆ ವಿತರಿಸಲಾಗಿದೆ. ಅಲ್ಲದೆ, ಕ್ರೀಡಾಪಟುಗಳ ಜೊತೆಗಿನ ಗ್ರೂಪ್‌ ಫೋಟೋದಲ್ಲಿಯೂ ಪತ್ನಿ ಇದ್ದಾರೆ.

‘ಸೆ.7ರಂದು ಕ್ರೀಡಾಂಗಣಕ್ಕೆ ಬಂದು ಅಧಿಕಾರ ವಹಿಸಿಕೊಂಡೆ. ಆ ಸಂದರ್ಭದಲ್ಲಿ ನನ್ನನ್ನು ಸ್ವಾಗತಿಸಲು ಹಾಗೂ ಅಭಿನಂದಿಸಲು ಹಲವಾರು ಮಂದಿ ಬಂದಿದ್ದರು. ಅದರಲ್ಲಿ ಸ್ನೇಹಿತರು, ಕುಟುಂಬದವರು ಇದ್ದರು. ಕೇಕ್‌ ತಂದು ಕತ್ತರಿಸಲು ಹೇಳಿದರು. ಇದನ್ನು ನಾನು ಹೇಗೆ ನಿರಾಕರಿಸಲಿ? ಇದು ಪಾರ್ಟಿಯೇ? ಈ ವಿಚಾರವನ್ನು ಇಲಾಖೆಯ ಆಯುಕ್ತರ ಗಮನಕ್ಕೂ ತಂದಿದ್ದೇನೆ’ ಎಂದು ಓಂಪ್ರಕಾಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಹಿಂದೆ ಹಲವಾರು ವರ್ಷ ಇಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಯೊಬ್ಬರ ಚಿತಾವಣೆ ಇದು. ತಮ್ಮ ಕಡೆಯವರಿಂದ ಸ್ವಾಗತ ಕಾರ್ಯಕ್ರಮದ ಫೋಟೋ ತೆಗೆಸಿ ಇಲ್ಲಸಲ್ಲದ ಕಥೆ ಕಟ್ಟಿದ್ದಾರೆ. ಆ ವ್ಯಕ್ತಿ ಮೇಲೆ ಹಲವು ದೂರುಗಳು ಬರುತ್ತಿವೆ. ವರ್ಗಾವಣೆಯಾಗಿ ಹೋಗಿರುವ ಅವರು ಮತ್ತೆ ಇಲ್ಲಿಗೆ ಬರಲೂ ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಕ್ರೀಡಾ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಕೋವಿಡ್‌ ಕಾರಣ ಟ್ರ್ಯಾಕ್‌ ಸೂಟ್‌ ವಿತರಿಸಿರಲಿಲ್ಲ. ಆ ವಿದ್ಯಾರ್ಥಿಗಳಿಗೆ ನಾನು ವಿತರಿಸಿದೆ. ಕೋಚ್‌ ಹಾಗೂ ಕ್ರೀಡಾಪಟುಗಳ ಒತ್ತಾಯದ ಮೇರೆಗೆ ನನ್ನ ಪತ್ನಿ ಕೂಡ ಇಬ್ಬರಿಗೆ ಸಮವಸ್ತ್ರ ನೀಡಿದರು. ಕ್ರೀಡಾಂಗಣ ವೀಕ್ಷಿಸಲು ನನ್ನ ಕುಟುಂಬದವರು ಬಂದಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.