ADVERTISEMENT

‘ಪರ್ವ ವಿರಾಟ್‌ ದರ್ಶನ‘ ವಿಚಾರ ಸಂಕಿರಣ ಇಂದು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 21:48 IST
Last Updated 20 ಫೆಬ್ರುವರಿ 2021, 21:48 IST

ಮೈಸೂರು: ರಂಗಾಯಣ ಮತ್ತು ಡಾ.ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ, ಪರ್ವ ಕಾದಂಬರಿ ಹಾಗೂ ರಂಗಪ್ರಸ್ತುತಿ ಕುರಿತಾಗಿ ಇದೇ 21ರಂದು ಮೈಸೂರಿನಲ್ಲಿ, ‘ಪರ್ವ ವಿರಾಟ್‌ ದರ್ಶನ’ ವಿಚಾರ ಸಂಕಿರಣ ಆಯೋಜಿಸಲಾಗಿದೆ.

‘ಪರ್ವ’ ನಾಟಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಭಾನುವಾರ ಬೆಳಿಗ್ಗೆ 10ಕ್ಕೆ ಕಲಾಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಎಸ್‌.ಎಲ್‌. ಭೈರಪ್ಪ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ, ಮಾರ್ಚ್ 12, 13 ಮತ್ತು 14ರಂದು ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕದ ಟಿಕೆಟ್‌ ಬಿಡುಗಡೆ ಮಾಡಲಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‌

ಪರ್ವ ಕಾದಂಬರಿಯ ರಷ್ಯನ್‌ ಮತ್ತು ಮ್ಯಾಂಡರಿನ್‌ ಭಾಷೆಯ ಆವೃತ್ತಿಯನ್ನು ಶತಾವಧಾನಿ ಆರ್‌. ಗಣೇಶ್ ಬಿಡುಗಡೆ ಮಾಡಲಿದ್ದು, ‘ಪರ್ವ ವಿರಾಟ್‌ ದರ್ಶನ’ ಕುರಿತು ಉಪನ್ಯಾಸ ನೀಡುವರು. ‘ಪರ್ವ ಚಿಗುರೊಡೆದ ಬಗೆ’ ಕುರಿತು ನಾಟಕ ನಿರ್ದೇಶಕ ಪ್ರಕಾಶ ಬೆಳವಾಡಿ ಮಾತನಾಡಲಿದ್ದಾರೆ.

ADVERTISEMENT

ಮಧ್ಯಾಹ್ನ 2.30ಕ್ಕೆ ‘ಪರ್ವ– ನಾಲ್ಕು ದಶಕದ ನೆನಪು’ಗಳನ್ನು ಎಸ್‌.ಎಲ್‌.ಭೈರಪ್ಪ ಹಂಚಿಕೊಳ್ಳಲಿದ್ದಾರೆ. ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜಿ.ಎಲ್‌.ಶೇಖರ್‌, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಳ್ಳುವರು. ವಿಚಾರ ಸಂಕಿರಣದಲ್ಲಿ ಭಾಗವಹಿಸಲು 600 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.