ಮೈಸೂರು: ‘ಅಪ್ಪ ತೋರಿಸಿದ ದಸರೆಯಲ್ಲಿನ ‘ಏರ್ಶೊ’ ನೋಡಿದ ನನಗೆ ಪೈಲಟ್ ಆಗಬೇಕು ಎಂಬ ಕನಸು ಚಿಗೊರೊಡೆಯಿತು’ ಎಂದು ಭಾರತೀಯ ವಾಯುಪಡೆಯ ‘ಟ್ರೈನಿ’ ಪೈಲಟ್ ಪುಣ್ಯಾ ನಂಜಪ್ಪ ತಿಳಿಸಿದರು.
ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನನ್ನ ಕನಸಿಗೆ ಅಪ್ಪ, ಅಮ್ಮ ನೀರೆರೆದರು. ನಂತರ, ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದೆ. ‘ಫ್ಲೈಯಿಂಗ್ ಬ್ರಾಂಚ್’ಗೆ ಆಯ್ಕೆಯಾದೆ’ ಎಂದು ಹೇಳಿದರು.
‘ಈ ವೇಳೆ ‘ಸೈಕ್ಲಿಂಗ್’ ಮಾಡುವಾಗ ನಾನು ಬಿದ್ದು ಗಾಯಗೊಂಡೆ. ಎದ್ದೇಳಲು ಆಗದಷ್ಟು ಪೆಟ್ಟಾಗಿತ್ತು. ಅದೊಂದು ಜೀವನದ ದುರ್ಭರ ಪ್ರಸಂಗ. ವೈದ್ಯಕೀಯವಾಗಿ ನಾನು ಫಿಟ್ ಆಗುತ್ತೇನೋ ಇಲ್ಲವೋ ಎಂಬ ದುಗುಡ ಇತ್ತು. ಕೊನೆಗೆ, ನಾನು ಚೇತರಿಸಿಕೊಂಡೆ ವೈದ್ಯಕೀಯ ಅರ್ಹತಾ ಪ್ರಮಾಣಪತ್ರವೂ ಸಿಕ್ಕಿತು’ ಎಂದು ವಿವರಿಸಿದರು.
ಶಾಲೆ ಮತ್ತು ಕಾಲೇಜುಗಳ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ‘ಟ್ರೈನಿ’ ಪೈಲಟ್ ಆಗಿ ಆಯ್ಕೆಗೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪುಣ್ಯ ನಂಜಪ್ಪ ಅವರನ್ನು ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಆರ್.ಸುರೇಶ್, ಕಾರ್ಯದರ್ಶಿ ಡಾ.ಡಿ.ಕೆ. ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.