ADVERTISEMENT

ಪ್ಲಾಸ್ಮಾ ದಾನಕ್ಕೆ ಮಹತ್ವ– ಮಂಗಳಾ ಸೋಮಶೇಖರ್

‘ಸೇವ ಹೀ ಸಂಘಟನೆ’ ಪರಿಕಲ್ಪನೆಯಡಿ ವಿವಿಧ ಕಾರ್ಯಕ್ರಮಗಳು; ಶ್ರೀವತ್ಸ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 9:03 IST
Last Updated 16 ಸೆಪ್ಟೆಂಬರ್ 2020, 9:03 IST

ಮೈಸೂರು: ಕೋವಿಡ್ ಸಂಕಷ್ಟದಲ್ಲಿ ಪ್ಲಾಸ್ಮಾ ಥೆರಪಿ ಬಡವರಿಗೂ ಲಭ್ಯವಾಗಬೇಕು. ಆ ನಿಟ್ಟಿನಲ್ಲಿ 70 ಮಂದಿ ವ್ಯಕ್ತಿಯಿಂದ ಪ್ಲಾಸ್ಮಾ ದಾನ ಮಾಡುವ ಕಾರ್ಯಕ್ರಮವನ್ನು ‘ಸೇವಾ ಹೀ ಸಂಘಟನೆ’ ಪರಿಕಲ್ಪನೆಯಡಿಯ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಬಿಜೆಪಿ ಗ್ರಾಮಾಂತರ (ಜಿಲ್ಲೆ) ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ತಿಳಿಸಿದರು.

ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಸೆ. 20ರವರೆಗೂ ಪಕ್ಷದ ಪ್ರತಿ ಮಂಡಲದಲ್ಲೂ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

70 ಮಂದಿ ಅಂಗವಿಕಲರಿಗೆ ಕೃತಕ ಅಂಗ ಜೋಡಣಾ ಉಪಕರಣಗಳು, 70 ಮಂದಿ ಬಡವರಿಗೆ ಉಚಿತವಾಗಿ ಕನ್ನಡಕ ವಿತರಣೆ, 70 ಆಸ್ಪತ್ರೆ ಹಾಗೂ ಬಡವರ ಕಾಲೊನಿಗಳಲ್ಲಿ ಹಣ್ಣು ವಿತರಣೆ, ಪ್ರತಿ ಮಂಡಲದಿಂದ ಕನಿಷ್ಠ 1 ರಕ್ತದಾನ ಶಿಬಿರ, ಪ್ರತಿ ಬೂತ್‌ನಲ್ಲೂ 70 ವೃಕ್ಷಾರೋಪಣ ಕಾರ್ಯಕ್ರಮ, ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಬಳಸದಿರುವ ಸಂಕಲ್ಪ, ಪ್ರಧಾನಿ ಸಾಧನೆ ಕುರಿತು 70 ವರ್ಚ್ಯುಯಲ್ ಸಮಾವೇಶ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ADVERTISEMENT

ನಗರ ಘಟಕದ ಅಧ್ಯಕ್ಷ ಶ್ರೀವತ್ಸ ಮಾತನಾಡಿ, ‘ಸೆ. 25ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಎಲ್ಲ ಬೂತ್‌ಗಳಲ್ಲೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ. 2ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಖಾದಿ ಉಪಯೋಗ ಮತ್ತು ಸ್ಥಾನೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸುವ ಅಭಿಯಾನ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಗ್ರಾಮಾಂತರ ವಿಭಾಗದ ಉಪಾಧ್ಯಕ್ಷ ರಾಜೇಗೌಡ, ಸಂಚಾಲಕರಾದ ಮಹೇಶ್‌ರಾಜ್‌ಅರಸ್, ಪ್ರದೀಪ್, ಕೇಬಲ್ ಮಹೇಶ್, ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.