ADVERTISEMENT

ಪೌರಕಾರ್ಮಿಕರ ವಿಶ್ರಾಂತಿ ಗೃಹ: ಆದ್ಯತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 12:33 IST
Last Updated 22 ಜನವರಿ 2026, 12:33 IST
   

ಮೈಸೂರು: ‘ಪೌರಕಾರ್ಮಿಕರು‌ ಕೆಲಸ ಮುಗಿಸಿದ ನಂತರ ಆಹಾರ ಸೇವನೆಗೆ ಹಾಗೂ ವಿಶ್ರಾಂತಿ ಪಡೆಯಲು ಅಗತ್ಯವಾದ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ನಗರ ಸ್ಥಳೀಯ ಸಂಸ್ಥೆಗಳು ವಿಶ್ರಾಂತಿ ಗೃಹ ನಿರ್ಮಾಣಕ್ಕೆ ತೊಂದರೆಗಳಿದ್ದರೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಪೌರಕಾರ್ಮಿಕರಿಗೆ ಜೀವ ವಿಮೆ ಮಾಡಿಸುವುದರಿಂದ ಅವರಿಗೆ ಬಹಳಷ್ಟು ಅನುಕೂಲವಾಗಲಿದೆ. ಆದ್ದರಿಂದ ಎಲ್ಲರಿಗೂ ಕಡ್ಡಾಯವಾಗಿ ಜೀವ ವಿಮೆ ಮಾಡಿಸಿಕೊಟ್ಟು ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ದೂರು ಪರಿಶೀಲಿಸಿ:

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಏಜೆನ್ಸಿಯವರು ಕೆಲಸಕ್ಕೆ ಪೌರಕಾರ್ಮಿಕರನ್ನು ಕಡಿಮೆ ಸಂಖ್ಯೆಯಲ್ಲಿ ನಿಯೋಜಿಸುತ್ತಾರೆ. ಇದರಿಂದ ಕೆಲಸದ ಒತ್ತಡ ಆಗುತ್ತದೆ. ಅಲ್ಲದೇ, ಅವರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎಂದು ದೂರುಗಳು ಕೇಳಿ ಬಂದಿವೆ. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಲಬೇಕು’ ಎಂದರು.

‘ನಿವೇಶನ ಹಾಗೂ ವಸತಿರಹಿತ ಪೌರಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಆದ್ಯತೆ ಕೊಡಬೇಕು. ಅವರಿಗೆ ನೀಡಲಾಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅವರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತ ಪ್ರವೇಶ ದೊರೆಯುವ ಬಗ್ಗೆ ತಿಳಿಸಿಕೊಡಬೇಕು‘ ಎಂದು ಸೂಚಿಸಿದರು.

‘ಮ್ಯಾನ್ಯುಯೆಲ್‌ ಸ್ಕ್ಯಾವೆಂಜರ್‌ಗಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಪೊಲೀಸರ ಸಹಾಯ ಪಡೆದು ಅವರನ್ನು ಪತ್ತೆ ಹಚ್ಚಿ ಸೌಲಭ್ಯ ಒದಗಿಸಬೇಕು’ ಎಂದು ತಿಳಿಸಿದರು.

ಕ್ರಮ ಕೈಗೊಳ್ಳಲು ಸೂಚನೆ:

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ಕಳೆದ ಸಾಲಿನಲ್ಲಿ ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರಿಗೆ ಪಿ.ಎಫ್, ಇಎಸ್ಐ ಪಾಲನ್ನು ಏಜೆನ್ಸಿಯವರು ಪಾವತಿಸಿಲ್ಲ ಎಂಬ ದೂರು ಕೇಳಿಬಂದಿದೆ. ಇದನ್ನು ಪರಿಶೀಲಿಸಿ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಾಗಿರುವ, ಬಾಹ್ಯ ಗುತ್ತಿಗೆ ಸೇವೆ ಒದಗಿಸುವ ಏಜೆನ್ಸಿಗಳು ಕಪ್ಪು ಪಟ್ಟಿಗೆ ಸೇರಿರುವ ಮಾಹಿತಿಯನ್ನು‌ ಪ್ರತಿ ವರ್ಷ ಇಲಾಖೆಗಳಿಗೆ ಒದಗಿಸಬೇಕು. ಆಗ, ಅಂತಹ ಸಂಸ್ಥೆಗಳಿಗೆ ಕಾರ್ಯಾದೇಶ ನೀಡುವುದು ತಪ್ಪುತ್ತದೆ. ಏಜೆನ್ಸಿಯಿಂದ ಪೌರಕಾರ್ಮಿಕರಿಗೆ ಸರಿಯಾಗಿ ವೇತನ ಕೊಡಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪಾಸ್‌ಬುಕ್ ಪಡೆದು ಪರಿಶೀಲಿಸಬೇಕು’ ಎಂದರು.

ಆಯೋಗದ ಕಾರ್ಯದರ್ಶಿ ಸುಮಾಯ್ ರೂಹಿ, ‘ಪೌರಕಾರ್ಮಿಕರಿಗೆ ಗುರುತುನ ಚೀಟಿ, ವೇತನಚೀಟಿ, ಪಿ.ಎಫ್, ಇ.ಎಸ್.ಐ ಪಾವತಿ, ಜೀವ ವಿಮೆ ಮಾಡಿಸಿದ ಬಗ್ಗೆ ಪೂರ್ಣ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್‌ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.