ಮೈಸೂರು: ‘ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾನೂನು ರೂಪಿಸಬೇಕು’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಒತ್ತಾಯಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಲವ್ ಜಿಹಾದ್ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.
‘ಲವ್ ಜಿಹಾದ್ ವಿರುದ್ಧ ಮೊದಲು ದ್ವನಿ ಎತ್ತಿದವನೇ ನಾನೇ. 3ಸಾವಿರ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ನಿಂದ ಪಾರು ಮಾಡಿದ್ದೇವೆ. ಪ್ರೀತಿ–ಪ್ರೇಮದ ವಿಷಯದಲ್ಲಿ ಹಿಂದೂ ಯುವತಿಯರು ಎಚ್ಚರಿಕೆ ವಹಿಸಬೇಕು. ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೇ, ಹಿಂದೂ ಧರ್ಮವನ್ನೂ ಬಲಿ ಕೊಡಬಾರದು’ ಎಂದು ತಿಳಿಸಿದರು.
‘ಮೈಸೂರು ಉಗ್ರರ ಪಾಲಿಗೆ ಸ್ಲೀಪಿಂಗ್ ಸೆಲ್ ಆಗುತ್ತಿದೆ. ಇಲ್ಲಿ ಉಗ್ರರು ಸ್ವೇಚ್ಚೆಯಿಂದ ಓಡಾಡುವಂತಾಗಿದೆ. ಅವರ ಚಟುವಟಿಕೆ ವ್ಯಾಪಕವಾಗುತ್ತಿದೆ. ಆದ್ದರಿಂದ, ಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಘಟಕ ಸ್ಥಾಪಿಸಬೇಕು. ನರಸಿಂಹರಾಜ ಕ್ಷೇತ್ರದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಬೇಕು ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ನನ್ನ ಬೆಂಬಲವೂ ಇದೆ’ ಎಂದು ಪ್ರತಿಕ್ರಿಯಿಸಿದರು.
‘ಉಗ್ರರು ತಾವು ಮಾಡುವ ಕೃತ್ಯಗಳನ್ನು ಹಿಂದೂಗಳ ಮೇಲೆ ಹಾಕಲು ಕುತಂತ್ರ ಮಾಡುತ್ತಿದ್ದಾರೆ. ಹಿಂದೂಗಳು ಎಂದಿಗೂ ಭಯೋತ್ಪಾದನಾ ಚಟುವಟಿಕೆ ನಡೆಸುವವರಲ್ಲ. ಇಸ್ಲಾಮಿಕ್ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು’ ಎಂದರು.
‘ಅಕ್ರಮ ಚಟುವಟಿಕೆಗಳು ನಡೆಯುವ ಕಾರಣದಿಂದಲೇ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎನ್ನುತ್ತಾರೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.