ಮೈಸೂರು: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಸೋಮವಾರವೂ ಮುಂದುವರಿದಿದೆ.
ನಿವೇದಿತಾ ನಗರದ ಪೆಟ್ರೋಲ್ ಬಂಕ್ ಬಳಿ ಚಾಮುಂಡೇಶ್ವರಿ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಇಲ್ಲಿ ಸಮಿತಿಯ ಅಧ್ಯಕ್ಷ ನಾಗನಹಳ್ಳಿ ಉಮಾಶಂಕರ್, ಕೆಪಿಸಿಸಿ ಉಸ್ತುವಾರಿಗಳಾದ ಗುರುಪಾದಸ್ವಾಮಿ ಮತ್ತು ಜೇಸುದಾಸ್, ಮಾಜಿ ಮೇಯರ್ ಟಿ.ಬಿ ಚಿಕ್ಕಣ್ಣ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಿನಕಲ್ ಮಂಜುನಾಥ್ ಇದ್ದರು.
ಮಾಜಿ ಶಾಸಕ ವಾಸು ನೇತೃತ್ವದಲ್ಲಿ ಮೈಸೂರು ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು, ದೇವರಾಜ ಹಾಗೂ ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಯಾದವಗಿರಿ ಆಕಾಶವಾಣಿ ಹಾಗೂ ಗೋಕುಲಂ, ಬೊಂಬು ಬಜಾರ್ನ ಪೆಟ್ರೊಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದರು.
ದ್ವಿಚಕ್ರ ವಾಹನವೊಂದಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಲಾಯಿತು.
ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ದೀಪಕ್ ಶಿವಣ್ಣ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್, ಉಪಾಧ್ಯಕ್ಷ ಸಯ್ಯದ್ ಅಬ್ರಾರ್, ಯೂತ್ ಕಾಂಗ್ರೆಸ್ ಮುಖಂಡರಾದ ಮನೋಜ್, ಐಟಿ ಸೆಲ್ನ ವಿನೋದ್, ಬ್ಲಾಕ್ ಅಧ್ಯಕ್ಷರಾದ ರಘು, ಪಡುವಾರಹಳ್ಳಿ ವಿಷ್ಣುಪ್ರಿಯ, ಚಂದ್ರು, ನಿತಿನ್ ಪುಟ್ಟಸ್ವಾಮಿ ಪಡುವಾರಹಳ್ಳಿ, ಯಶವಂತ್, ಮೊಹಮ್ಮದ್ ಬುರಾನ್, ದೇಶಿಕ್, ಗಣೇಶ್ ಇದ್ದರು.
ಆರ್ಟಿಒ ವೃತ್ತದಲ್ಲಿ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ದ್ವಿ ಚಕ್ರ ವಾಹನವನ್ನು ಹಗ್ಗದಿಂದ ಎಳೆದ ಕಾರ್ಯಕರ್ತರು: ಎನ್ಎಸ್ಯುಐ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದ ಸಮೀಪ ಇರುವ ಪೆಟ್ರೋಲ್ ಬಂಕ್ ಮುಂದೆ ದ್ವಿ ಚಕ್ರ ವಾಹನವನ್ನು ಹಗ್ಗದಲ್ಲಿ ಕಟ್ಟಿ ಎಳೆಯುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಕೂಡಲೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ರಫಿಕ್ ಅಲಿ, ರಜತ್, ಸಾಗರ್, ದರ್ಶನ್ ತೌಶಿಕ್, ಸಮೀರ್, ಆಕಾಶ್, ಬಾಲರಾಜ್, ಸುಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.