ಮೈಸೂರು: ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ ಖಂಡಿಸಿ, ನಗರದಲ್ಲಿ ಪ್ರಗತಿಪರ ಸಂಘಟನೆಗಳು ಶುಕ್ರವಾರ ಪ್ರತಿಭಟಿಸಿದವು.
ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ‘ಶಿಕ್ಷಣದ ವ್ಯಾಪಾರೀಕರಣ ಮತ್ತು ವಿದ್ಯಾರ್ಥಿ ಹಕ್ಕುಗಳ ಮೇಲಿನ ದಾಳಿ ನಿಲ್ಲಲಿ’ ಎಂಬ ಘೋಷಣೆ ಮೊಳಗಿಸಿದರು. ಕೇಂದ್ರ ಸರ್ಕಾರ ಜೆಎನ್ಯು ಖಾಸಗೀಕರಣ ಮಾಡಲು ಹೊರಟಿರುವುದನ್ನು ಇದೇ ಸಂದರ್ಭ ತೀವ್ರವಾಗಿ ಖಂಡಿಸಿದರು.
ಯಾವುದೇ ಪೂರ್ವ ಆಲೋಚನೆಯಿಲ್ಲದೆ ₹ 240 ಇದ್ದ ವಿದ್ಯಾರ್ಥಿನಿಲಯದ ಕೊಠಡಿ ಬಾಡಿಗೆಯನ್ನು ₹ 7,200ಕ್ಕೆ ಏರಿಕೆ ಮಾಡಿರುವುದು ಸರಿಯಲ್ಲ. ಭದ್ರತಾ ಠೇವಣಿಯನ್ನು ₹ 5,500ರಿಂದ ₹ 12,000ಕ್ಕೆ ಏರಿಕೆ ಮಾಡಲಾಗಿದೆ. ಇನ್ನಿತರ ಸೌಕರ್ಯ ಕಲ್ಪಿಸಲು ಒಟ್ಟು ₹ 20,400 ಶುಲ್ಕವನ್ನು ಮಾಡಿರುವುದು ವಿದ್ಯಾರ್ಥಿ ವಿರೋಧಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶುಲ್ಕ ಹೆಚ್ಚಳ ಎಂಬುದು ಕೇವಲ ಜೆಎನ್ಯು ವಿ.ವಿ.ಗೆ ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಖಾಸಗೀಕರಣವೂ ನಡೆಯುತ್ತಿದೆ. ಇದರ ಭಾಗವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ಮಧ್ಯೆ ಜಿಯೋ ವಿ.ವಿ.ಗೆ ₹ 1 ಸಾವಿರ ಕೋಟಿ ನೀಡಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಲಯದ ಕೊಠಡಿ ಬಾಡಿಗೆ ಏರಿಕೆಯನ್ನು ಇಳಿಸಬೇಕು ಎಂದು ಇದೇ ಸಂದರ್ಭ ಪ್ರತಿಭಟನಾಕಾರರು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.