ಹುಣಸೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿನ ತೆಕ್ಕಲು ಹಾಡಿಯ ಜೇನುಕುರುಬ ಆದಿವಾಸಿ ಸಮುದಾಯ ಲಕ್ಷ್ಮಿ ಮತ್ತು ಸಿಂಚನ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಆದಿವಾಸಿ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತೆಕ್ಕಲಹಾಡಿಯ ಆದಿವಾಸಿ ದಂಪತಿ ಶಿವಣ್ಣ ಮತ್ತು ಜಾಜಿ ಪುತ್ರಿ ಲಕ್ಷ್ಮಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ವ್ಯಾಸಂಗ ನಡೆಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 68.5 ರಷ್ಟು ಅಂಕಪಡೆದು ತೇರ್ಗಡೆಯಾಗಿದ್ದಾರೆ. ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿವಣ್ಣ ಮತ್ತು ರಾಜಮ್ಮ ದಂಪತಿ ಪುತ್ರಿ ಸಿಂಚನ ಕಲಾ ವಿಭಾಗದಲ್ಲಿ ಶೇ 64 ರಷ್ಟು ಅಂಕ ಪಡೆದಿದ್ದಾರೆ.
ಈ ಇಬ್ಬರು ಬಾಲಕಿಯರು ಆದಿವಾಸಿ ಗಿರಿಜನ ಮಕ್ಕಳ ಸಾಧನೆಗೆ ಪ್ರೇರಣೆಯಾಗಿದ್ದು, ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಕಾಯಂ ಶಿಕ್ಷಕರನ್ನು ನಿಯೋಜಿಸಬೇಕು ಹಾಗೂ ಪದವಿ ಪೂರ್ವ ಕಾಲೇಜು ಆರಂಭಿಸಿ ಗಿರಿಜನ ಮಕ್ಕಳ ಶಿಕ್ಷಣವನ್ನು ಆ ಸಮುದಾಯದವರೊಂದಿಗೆ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಹೀಗೆ ಮಾಡಿದರೆ ಆದಿವಾಸಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಗುಣಾತ್ಮಕ ಶಿಕ್ಷಣ ಸಿಗಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.