ಮೈಸೂರು: ಸ್ನೇಹಿತೆಯಿಂದ ಚಿನ್ನಾಭರಣ ಪಡೆದು ವಾಪಸ್ ನೀಡದೇ ಗಿರವಿ ಇಟ್ಟು ಮೋಸ ಮಾಡಿದ್ದ ನಗರದ ಹಳೆ ಬಂಡಿಕೇರಿ ನಿವಾಸಿ ಯಶೋಧಾ ಅವರಿಗೆ ಇಲ್ಲಿನ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯವು 6 ತಿಂಗಳು ಜೈಲು ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿದೆ.
ಈಕೆಯು 2012ರಲ್ಲಿ ತನ್ನ ತಂಗಿಯರಿಗೆ ಮದುವೆ ಮಾಡಿಸಲು ಫೋಟೋ ತೆಗೆಯಬೇಕು ಎಂದು ಹೇಳಿ ಸ್ನೇಹಿತೆ ಜಯಂತಿ ಅವರಿಂದ 83.5 ಗ್ರಾಂ ತೂಕದ ಚಿನ್ನದ ಸರ, 11.7 ಗ್ರಾಂ ತೂಕದ ಕಿವಿಯ ಚಿನ್ನದ ಲೋಲಾಕು ಪಡೆದು ವಾಪಸ್ ನೀಡಿರಲಿಲ್ಲ. ಅಲ್ಲದೆ, ಚಿನ್ನಾಭರಣವನ್ನು ₹ 1.85 ಲಕ್ಷ ಹಣ ಪಡೆದು ಗಿರವಿ ಇಡುವ ಮೂಲಕ ಜಯಂತಿ ಅವರಿಗೆ ಮೋಸ ಮಾಡಿದ್ದರು.
ಈ ಸಂಬಂಧ ಕೆ.ಆರ್.ಠಾಣೆಯಲ್ಲಿ ಜಯಂತಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಗಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೈಸೂರಿನ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯಶವಂತ್ಕುಮಾರ್ ಅವರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.