ADVERTISEMENT

ಹಂಪಾಪುರ: ವಿವಿಧ ಬೇಡಿಕೆಗೆ ಸಚಿವರ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 15:16 IST
Last Updated 19 ನವೆಂಬರ್ 2022, 15:16 IST
‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕಂದಾಯ ಸಚಿವ ಆರ್.ಅಶೋಕ್‌ ವಿವಿಧ ಸವಲತ್ತುಗಳನ್ನು ವಿತರಿಸಿದರು.
‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕಂದಾಯ ಸಚಿವ ಆರ್.ಅಶೋಕ್‌ ವಿವಿಧ ಸವಲತ್ತುಗಳನ್ನು ವಿತರಿಸಿದರು.   

ಹಂಪಾಪುರ: ಸಚಿವ ಅಶೋಕ್ ಭೀಮನಕೊಲ್ಲಿ ಮತ್ತು ಕೆಂಚನಹಳ್ಳಿಯಲ್ಲಿ ಸಾರ್ವಜನಿಕರಿಂದ 1,500ಕ್ಕೂ ಹೆಚ್ಚು ಮನವಿಗಳನ್ನು ಸ್ವೀಕರಿಸಿದರು. ಎಚ್‌.ಡಿ.ಕೋಟೆ ತಾಲ್ಲೂಕು ಮತ್ತು ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಜನರಿಂದ ಅಹವಾಲುಗಳ ಮಹಾಪೂರವೇ ಹರಿದುಬಂತು.

‘ನೆರೆ ಹಾಗೂ ಅತಿವೃಷ್ಟಿಯಿಂದ ಮನೆಗಳಿಗೆ ಆಗಿರುವ ಹಾನಿಗೆ ಪರಿಹಾರ ನೀಡುವಲ್ಲಿ ತಾಲ್ಲೂಕು ಆಡಳಿತ ತಾರತಮ್ಯ ಮಾಡಿದೆ. ಹಲವು ಮಂದಿಗೆ ಪರಿಹಾರ ನೀಡಲು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದು ಬಹಳ ಅರ್ಜಿಗಳು ಬಂದವು. ಅಲ್ಲದೇ ತಾಲ್ಲೂಕಿನ ಪ್ರಮುಖ ಸಮಸ್ಯೆಯಾದ ಜಮೀನುಗಳ ಪೋಡಿನ ಬಗ್ಗೆ ಹಲವು ಅರ್ಜಿಗಳು ಬಂದವು.

ಕೆಂಚನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಬೇಡಿಕೆಗಳನ್ನು ಸಚಿವರು ಸ್ಥಳದಲ್ಲೇ ಪರಿಹರಿಸಿದರು.

ADVERTISEMENT

‘ಬೇಗೂರು ಗ್ರಾಮ ಪಂಚಾಯಿತಿಗೆ ಹಂಗಾಮಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಲಾಗಿದೆ. ಪೂರ್ಣ ಪ್ರಮಾಣದ ಅಧಿಕಾರಿ‌ ನೇಮಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸ್ಪಂದಿಸಿದ ಸಚಿವರು ಪೂರ್ಣಾವಧಿ ಅಧಿಕಾರಿಯನ್ನು ನೇಮಿಸುವಂತೆ ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ ಅವರಿಗೆ ಆದೇಶಿಸಿದರು.

ಗ್ರಾಮಸ್ಥರ ಬೇಡಿಕೆಯಂತೆ, ಸ್ಮಶಾನಕ್ಕೆ 20 ಗುಂಟೆ ಜಮೀನನ್ನು ಸ್ಥಳದಲ್ಲೇ ಮಂಜೂರು ಮಾಡಿದರು.

‘ನೂರಾರು ಅರ್ಜಿಗಳು ಬಂದಿವೆ. ಸಾದ್ಯವಾದಷ್ಟು ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ. ಇನ್ನುಳಿದ ಅರ್ಜಿಗಳನ್ನು 20 ದಿನಗಳಲ್ಲಿ ಆಯಾ ಇಲಾಖೆಯ ಮೂಲಕ ಪರಿಹರಿಸಲಾಗುವುದು’ ಎಂದು ಅರ್ಜಿದಾರರಿಗೆ ಭರವಸೆ ನೀಡಿದರು.

‘ಈ ಹಿಂದಿನ 11 ಗ್ರಾಮ ವಾಸ್ತವ್ಯಗಳನ್ನು ಅರಳಿ ಮರದ ಕೆಳಗೋ, ದೇವಾಲಯದ ಬಳಿಯೋ ಮಾಡುತ್ತಿದ್ದೆ. 150 ಮಂದಿ ಮಾತ್ರ ಇರುತ್ತಿದ್ದರು. ಕೆಂಚನಹಳ್ಳಿ ಗ್ರಾಮದಲ್ಲಿ ಶಾಮಿಯಾನ ಹಾಕಿ, 2ಸಾವಿರಕ್ಕೂ ಹೆಚ್ಚಿನ ಜನರ ಮಧ್ಯೆ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.