ಮೈಸೂರು: ‘ನಗರದ ರೈಲ್ವೆ ಸಹಕಾರ ಬ್ಯಾಂಕ್ನ ಶತಮಾನೋತ್ಸವ, 105ನೇ ವರ್ಷದ ಸಂಭ್ರಮದ ಅಂಗವಾಗಿ ‘ಶತ ಪಯಣ’ ಕಾರ್ಯಕ್ರಮವನ್ನು ಸೆ.6ರಂದು ಬೆಳಿಗ್ಗೆ 10.30ಕ್ಕೆ ಜೆ.ಕೆ. ಮೈದಾನದ ಎಂಎಂಸಿಆರ್ಐ ಸಭಾಂಗಣದಲ್ಲಿ ಆಯೋಜಿಸಲಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಬಿ. ಮಂಜೇಗೌಡ ತಿಳಿಸಿದರು.
ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.
‘ಬ್ಯಾಂಕ್ ಸ್ಥಾಪನೆಗೆ ಕೊಡುಗೆ ನೀಡಿದ ಹಿರಿಯ ಸದಸ್ಯರು ಹಾಗೂ ಪ್ರಮುಖರನ್ನು ಸನ್ಮಾನಿಸಲಾಗುವುದು. ಎಸ್ಎಸ್ಎಲ್ಸಿ ಹಾಗೂ ಅದಕ್ಕಿಂತ ಹೆಚ್ಚಿನ ಪರೀಕ್ಷೆಗಳಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಲಾಗುವುದು’ ಎಂದು ಹೇಳಿದರು.
‘1920ರ ಏ.1ರಂದು ಬೆಂಗಳೂರು ರೈಲ್ವೆ ಆಡಿಟ್ ಕಚೇರಿಯ ಸಣ್ಣ ಕೊಠಡಿಯಲ್ಲಿ ಸಹಕಾರ ಸಂಘವಾಗಿ ಹುಟ್ಟಿಕೊಂಡ ಈ ಬ್ಯಾಂಕ್, ಮೈಸೂರು ರಾಜ್ಯ ರೈಲ್ವೆ ಖಾತೆಗಳ ಪ್ರವಾಸಿ ಪರಿಶೀಲಕ ಎಲ್.ವಿ. ಗೋಪಾಲನ್ ಅವರ ದೂರದೃಷ್ಟಿ ಫಲವಾಗಿ ಕೇವಲ 112 ಸದಸ್ಯರು ಹಾಗೂ ₹ 2,580 ಹಂಚಿಕೆ ಬಂಡವಾಳದಿಂದ ಆರಂಭವಾಯಿತು. ಈಗ, 10ಸಾವಿರಕ್ಕೂ ಹೆಚ್ಚು ಸದಸ್ಯರು ಹಾಗೂ ₹650 ಕೋಟಿಗೂ ಮೀರಿದ ಠೇವಣಿಗಳೊಂದಿಗೆ ನಂಬಿಕೆಯ ಪ್ರತೀಕವಾಗಿ ಪ್ರಮುಖ ಸಹಕಾರ ಬ್ಯಾಂಕ್ ಆಗಿ ಬೆಳೆದಿದೆ’ ಎಂದು ವಿವರಿಸಿದರು.
‘ಮೈಸೂರು ಅಶೋಕಪುರಂ ರೈಲ್ವೆ ವರ್ಕ್ಶಾಪ್, ಶೇಷಾದ್ರಿ ಅಯ್ಯರ್ ರಸ್ತೆ (ಮುಖ್ಯ ಶಾಖೆ), ಬೆಂಗಳೂರಿನ ಯಲಹಂಕ ಮತ್ತು ಅರಸೀಕೆರೆಯ ಶಾಖೆಗಳ ಮೂಲಕ ಗ್ರಾಹಕರಿಗೆ ಸಾಲ, ಮುಂಗಡ ಮತ್ತು ಠೇವಣಿ ಮೊದಲಾದ ಸೇವೆಗಳನ್ನು ಒದಗಿಸುತ್ತಿದೆ. 30 ನಿಮಿಷಗಳಲ್ಲಿ ಸಾಲ ಮಂಜೂರಾತಿ ಮಾಡುವ ವ್ಯವಸ್ಥೆ ಇದರ ವೈಶಿಷ್ಟ್ಯ. 2007ರಲ್ಲಿ ಜಿಲ್ಲೆಯ ಅತ್ಯುತ್ತಮ ಸಹಕಾರ ಬ್ಯಾಂಕ್ ಎಂಬ ಗೌರವವನ್ನು ಪಡೆದಿದೆ’ ಎಂದು ಹೇಳಿದರು.
‘ತಂತ್ರಜ್ಞಾನ ಬಳಕೆಗೆ ಗಮನಹರಿಸಿದ್ದು, ಕಂಪ್ಯೂಟರೀಕರಣದ ನಂತರ ‘ಎ-ಗ್ರೇಡ್’ ಗಳಿಸಿದೆ. 2009ರಿಂದ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅಂತರರಾಜ್ಯ ಸಹಕಾರ ಬ್ಯಾಂಕ್ ಆಗಿ ಪರಿವರ್ತಿಸಲು ಹಾಗೂ ಹುಬ್ಬಳ್ಳಿ, ಮಂಗಳೂರು, ಮಂಡ್ಯ ಮತ್ತು ದಾವಣಗೆರೆಯಲ್ಲಿ ಹೊಸ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ಉಪಾಧ್ಯಕ್ಷ ಎಸ್. ಆನಂದ್, ಸಿಇಒ ನರಾಯಣ್, ನಿರ್ದೇಶಕರಾದ ಶಿವಶಂಕರ ಸಿ., ಶ್ವೇತಾ, ಉತ್ತೇಜ್, ಚಂದ್ರು, ನಿರ್ಮಲಾ, ಪ್ರಧಾನ ವ್ಯವಸ್ಥಾಪಕ ಸತ್ಯನಾರಾಯಣ ಮತ್ತು ಲಕ್ಷ್ಮೀಪ್ರಸಾದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.