ಮೈಸೂರು: ಕೆ.ಆರ್.ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಆಯೋಜಿಸಿದ್ದ ನಾಲ್ಕು ದಿನದ ಬೃಹತ್ ಉದ್ಯೋಗ, ಕೌಶಲ ಅಭಿವೃದ್ಧಿ, ಸ್ವಯಂ-ಉದ್ಯೋಗ ನೋಂದಣಿ ಕಾರ್ಯಕ್ರಮದ ಸಮಾರೋಪ ಶುಕ್ರವಾರ ನಗರದ ಸಮರ್ಥ ಕಲ್ಯಾಣ ಮಂದಿರದಲ್ಲಿ ನಡೆಯಿತು.
‘ಮೋದಿ ಯುಗ್ ಉತ್ಸವದ ಮೂಲಕ 71 ಸಾವಿರ ಜನರಿಗೆ ಸರ್ಕಾರದ ಯೋಜನೆ ತಲುಪಿಸಿದ ಶಾಸಕ ರಾಮದಾಸ್ ಇದೀಗ ಉದ್ಯೋಗ, ಕೌಶಲ ನೀಡುವ ಪ್ರಯತ್ನ ನಡೆಸಿದ್ದಾರೆ. ವಿನೂತನ ಕಾರ್ಯಕ್ರಮಗಳಿಂದ ರಾಮದಾಸ್ ರಾಜ್ಯ, ದೇಶಕ್ಕೆ ಮಾದರಿಯಾಗಿದ್ದಾರೆ’ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಶಿವಕುಮಾರ್ ತಿಳಿಸಿದರು.
‘ಪ್ರಧಾನಿ ಮೋದಿ ಕೌಶಲಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ರಾಮದಾಸ್ ಅವರಂತೆಯೇ ರಾಜ್ಯದ ಉಳಿದ ಎಲ್ಲಾ ಶಾಸಕರು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡರೆ ನಿರುದ್ಯೋಗ ಸಮಸ್ಯೆಯೇ ಇರುವುದಿಲ್ಲ. ನಮ್ಮ ಶಾಸಕರು ಮಾದರಿ’ ಎಂದು ಮೇಯರ್ ಸುನಂದಾ ಫಾಲನೇತ್ರ ಬಣ್ಣಿಸಿದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ ‘ದೇಶಕ್ಕೆ ಹೊಸ ಮಾದರಿ ನೀಡಬೇಕು ಎಂಬುದಕ್ಕೆ ಈ ವಿಶೇಷ ಕಾರ್ಯಕ್ರಮ ನಡೆಸಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಅಪಾರ ಕಾರ್ಯಕರ್ತರು, ಅಧಿಕಾರಿಗಳ ಪರಿಶ್ರಮವಿದೆ’ ಎಂದರು. ಹಲವು ಅಧಿಕಾರಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು.
ಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಚಂಪಕ, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಉಪಾಧ್ಯಕ್ಷ ಸಂತೋಷ್ ಶಂಭು, ಜೆ.ರವಿಕುಮಾರ್, ದೇವರಾಜೇಗೌಡ, ಒಬಿಸಿ ಮೋರ್ಚಾದ ಶಿವಪ್ಪ, ಯುವ ಮೋರ್ಚಾ ಅಧ್ಯಕ್ಷ ಮನು ಶೈವ (ಅಪ್ಪಿ), ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಗೌರಿ, ಅನ್ನಪೂರ್ಣ, ವಾರ್ಡ್ ಉಸ್ತುವಾರಿಗಳಾದ ಮುರುಳಿ, ರವಿ, ಮಧು, ಗೋವಿಂದ್, ಡಿಪೋ ರವಿ, ಗಿರೀಶ್ ಗೌಡ, ಆದರ್ಶ್, ಶಾಂತವೀರಪ್ಪ, ಗೋಪಾಲ್, ಅಭಿಲಾಷ್, ಸಂಪತ್, ಮಾಯ ಜಗದೀಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.